ಹುಬ್ಬಳ್ಳಿ : ಕಮಿಟಿಯೊಳಗಿನ ಸದಸ್ಯರ ಬದಿದಾಟದಿಂದಾಗಿ ಹಲವು ವರ್ಷದಿಂದ ಆಶ್ರಯ ಪಡೆದಿದ್ದ ವೃದ್ಧರು ಬೀದಿಪಾಲಾಗಿದ್ದಾರೆ. ಇಲ್ಲಿನ ಕೇಶ್ವಾಪುರದಲ್ಲಿನ ವೃದ್ಧಾಶ್ರಮದ ಜಾಗವನ್ನು ಸೊಸೈಟಿ ಆಫ್ ವಿಲ್ಸೆಂಟ್ ತನ್ನ ವಶಕ್ಕೆ ಪಡೆದಿದ್ದು, ವೃದ್ಧರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
30ಕ್ಕೂ ಹೆಚ್ಚು ವೃದ್ಧರಿಗೆ ಆಶ್ರಯ ಕಲ್ಪಿಸಿದ್ದ ಜಾಗದಲ್ಲಿ ಸೊಸೈಟಿ ಆಫ್ ವಿಲ್ಸೆಂಟ್ ಗೆಸ್ಟ್ಹೌಸ್ ನಿರ್ಮಿಸಲು ಮುಂದಾಗಿದ್ದು, ಇದರಿಂದ ವೃದ್ಧಾಶ್ರಮ ಜಾಗ ತೆರವು ಮಾಡಿದೆ ಎಂದು ವೃದ್ಧಾಶ್ರಮದ ಅಧ್ಯಕ್ಷ ರಾಜು ಜೋಸೆಫ್ ಆರೋಪಿಸಿದ್ದಾರೆ.
ಇಲ್ಲಿದ್ದ ವೃದ್ಧರನ್ನು ಕಾರವಾರದ ವೃದ್ಧಾಶ್ರಮಕ್ಕೆ ಬಿಟ್ಟು ಬರಲಾಗಿತ್ತು. ಆದರೆ, ಅಲ್ಲಿ ವ್ಯವಸ್ಥೆ ಸರಿಯಿಲ್ಲದ ಕಾರಣ ವೃದ್ಧರು ಮತ್ತೆ ಅಲ್ಲಿಂದ ಇಲ್ಲಿಗೆ ಬಂದಿದ್ದಾರೆ. ಹಳೆಯ ಕಮಿಟಿ ಸದಸ್ಯರಾಗಿದ್ದ ಸ್ಟೀವನ್ ಕರಡಿ, ಫೆಸಿಲ್ಲಾ ಲಾಯ್ಡ್ ಅವರ ಸಹೋದರಿ ಮತ್ತು ಸ್ಟೀವನ್ ಅಳಿಯ ಬ್ಯಾಯನ್ ಡಿಸೋಜ, ಬ್ರಿಗೇಜಾ ಸೇರಿ ಹಲವರು ಆಶ್ರಮಕ್ಕೆ ನುಗ್ಗಿ ದಾಂಧಲೆ ಮಾಡಿ ಸಿಸಿ ಕ್ಯಾಮೆರಾ ಸೇರಿದಂತೆ ಲಾಕರ್ಗಳನ್ನು ಮುರಿದು ಅಲ್ಲಿದ್ದ ದಾಖಲೆ ಪತ್ರಗಳನ್ನ ಮತ್ತು ಒಡವೆಗಳನ್ನು ತುಂಬಿಕೊಂಡು ಹೋಗಿದ್ದಾರೆ ಅಂತಾ ಆರೋಪಿಸಿದ್ದಾರೆ.
ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಹಾಲಿ ಉಪಾಧ್ಯಕ್ಷ, ಅಧ್ಯಕ್ಷ ಜೋಸೆಫ್ ಈಗಿರುವ ವೃದ್ಧರ ಬಳಿ ತಿಂಗಳಿಗೆ ಹಣ ಪಡೆಯುತ್ತಿದ್ದ. ಅಲ್ಲದೆ ಇದರ ವ್ಯವಹಾರ ಕೇಳಿದ್ದಕ್ಕೆ ಈ ರೀತಿಯಾಗಿ ನಮ್ಮ ಸೊಸೈಟಿ ಮೇಲೆ ಆರೋಪ ಮಾಡುತ್ತಿದ್ದಾರೆ ಅಂತಾ ಪ್ರತ್ಯಾರೋಪ ಮಾಡಿದ್ದಾರೆ. ಅಲ್ಲದೆ ಅವರು ಮಾಡಿದ ಸೊಸೈಟಿಗೆ ಯಾವುದೇ ನ್ಯಾಷನಲ್ ಅಥಾರಿಟಿಯಿಂದ ಪರವಾನಿಗೆ ಸಹ ಪಡೆದಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು, ಪ್ರೆಸಿಡೆಂಟ್ ಸೆಂಟ್ ವಿಲ್ಸೆಂಟ್ ಡಿ ಸೊಸೈಟಿ ಆಸ್ತಿಯಲ್ಲಿ ವೃದ್ಧಾಶ್ರಮ ನಡೆಸಲಾಗುತ್ತಿದೆ. ಆಸ್ತಿಯನ್ನು 30 ವರ್ಷಗಳ ಕಾಲ ಲೀಸ್ಗೆ ನೀಡಲಾಗಿದೆ. ಪ್ರತಿ ವರ್ಷ 2 ಸಾವಿರ ರೂ. ಹಣವನ್ನು ಸೊಸೈಟಿಗೆ ಕಟ್ಟಬೇಕಿದೆ.
ಸೊಸೈಟಿಯ ಹಾಲಿ ಮತ್ತು ಮಾಜಿ ಸದಸ್ಯರ ಜಟಾಪಟಿಯಲ್ಲಿ ಅನಾಥ ಜೀವಗಳು ಸಂಕಷ್ಟ ಎದುರಿಸುತ್ತಿವೆ. ಅಧ್ಯಕ್ಷರು ಹಾಗೂ ಸೊಸೈಟಿ ನಡುವಿನ ಮನಸ್ತಾಪ ಕೊನೆಗೊಂಡು ವೃದ್ಧಾಶ್ರಮದ ಜಾಗ ಉಳಿಯಬೇಕು ಎಂದು ಹಿರಿಯ ಜೀವಗಳು ಆಶಿಸುತ್ತಿವೆ.
ಇದನ್ನೂ ಓದಿ: ವೃದ್ಧಾಶ್ರಮ ಜಾಗ ಕಬಳಿಕೆ ಪ್ರಶ್ನಿಸಿದ ವ್ಯಕ್ತಿಯ ಕೊಲೆಗೆ ಸುಪಾರಿ ಆರೋಪ; ದೂರು ದಾಖಲು