ಹುಬ್ಬಳ್ಳಿ: ಮರಾಠಿಗರು ವಲಸಿಗರಲ್ಲ. ಭಾಷಾ ಸಾಮರಸ್ಯ ಕದಡುವುದು ಬೇಡ. ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡುವುದು ಬೇಡ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿ ಎಸ್ ಶ್ಯಾಮಸುಂದರ್ ಗಾಯಕ್ವಾಡ್ ಮನವಿ ಮಾಡಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ ಸರ್ಕಾರ ಸಮುದಾಯದ ಏಳಿಗೆಗಾಗಿ ಅಭಿವೃದ್ಧಿ ನಿಗಮ ಮಂಡಳಿ ಮಂಜೂರು ಮಾಡಲಾಗಿದೆ. ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದು,ರಾಜ್ಯದಲ್ಲಿ ಹುಟ್ಟಿ,ಬೆಳೆದು,ಇಲ್ಲಿನ ನೆಲ, ಜಲ, ಭಾಷೆ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿರುವ ನಾವು ಕನ್ನಡಿಗರು.
ನಾವೆಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳೋಣ. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಂತರ ಮಾರಾಠಿ ಜನಾಂಗದ ವಿರುದ್ಧ ಕೆಲ ಕನ್ನಡ ಪರ ಹೋರಾಟಗಾರರು, ಸಂಘಟನೆಗಳು ಮಾಡುತ್ತಿರುವ ಆರೋಪ ಭಾಷಾ ಸಾಮರಸ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿರುವ ಅಸಮಾಧಾನ ತಂದಿದೆ.
ಮರಾಠರು ದೇಶದ ನಾಲ್ಕನೇ ಅತಿ ದೊಡ್ಡ ಜನಾಂಗ, ಕರ್ನಾಟಕದಲ್ಲಿ ಆರನೇ ದೊಡ್ಡ ಜನಸಂಖ್ಯೆ ಹೊಂದಿದೆ. ಚಾಮರಾಜನಗರದಿಂದ ಬೀದರ್ವರೆಗೆ ಪೂರ್ವದ ಬಳ್ಳಾರಿಯಿಂದ ಉತ್ತರ ಕನ್ನಡದ ಗೋಕರ್ಣದವರೆಗೆ 50 ಲಕ್ಷಕ್ಕೂ ಹೆಚ್ಚು ಜನ ರಾಜ್ಯದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ.
32 ಕ್ಷತ್ರಿಯ ಪಂಗಡಗಳಾಗಿ ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಶತಶತಮಾನಗಳಿಂದ ಅಪ್ಪಟ ಕನ್ನಡಿಗರಾಗಿ ಶಾಂತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಹೋರಾಟಕ್ಕೆ ಮರಾಠ ಮುಖಂಡರು ಕೈಜೋಡಿಸಿ ಸಹಿ ಮಾಡಿದ್ದಾರೆ ಎಂದರು.