ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂರು ಬಾರಿ ಶಾಸಕರಾಗಲು ಪಂಚಮಸಾಲಿ ಸಮಾಜದ ಆಶೀರ್ವಾದ ಇದೆ. ಹಾಗಾಗಿ ನಮ್ಮ ಸಮಾಜವನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಪಂಚಮಸಾಲಿ ಪಾದಯಾತ್ರೆಯ ಪ್ರವರ್ತಕ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿಗಳ ಮಕ್ಕಳ ಮುಂದಿನ ಪೀಳಿಗೆಗೋಸ್ಕರ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಐತಿಹಾಸಿಕ ಪಾದಯಾತ್ರೆಯನ್ನು ಕೈಗೊಳ್ಳಲಾಗಿದೆ. ಅದಾದ ನಂತರ ಪ್ರಪಂಚಕ್ಕೆ ಪಂಚಮಸಾಲಿಗಳ ಒಗ್ಗಟ್ಟಿನ ಬಲಪ್ರದರ್ಶನ ತೋರಿಸಲಾಗಿದೆ. ಆಗ ಸಿಎಂ ಸೆ.15 ರೊಳಗೆ ಮೀಸಲಾತಿ ಕೊಡುವುದಾಗಿ ಅಧಿವೇಶನದಲ್ಲಿ ಮಾತು ಕೊಟ್ಟಿದ್ದರು. ಹಾಗಾಗಿ ಸಮಾಜದ ಜನರನ್ನು ಎಚ್ಚರಿಸಲು ಮಲೆಮಾದೇಶ್ವರ ಬೆಟ್ಟದಿಂದ ಕರ್ನಾಟಕದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ರಾಜ್ಯಮಟ್ಟದ ಬೃಹತ್ ಅಭಿಯಾನ ಏರ್ಪಡಿಸಲಾಗಿದ್ದು, ಇವತ್ತು 31ನೇ ದಿನಕ್ಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹು-ಧಾ ಮಹಾನಗರದ ಜಿಲ್ಲಾಮಟ್ಟದ ಪಂಚಮಸಾಲಿ ಪ್ರತಿಜ್ಞಾವಿಧಿ ನಡೆಯುತ್ತಿದ್ದು, ಅಭಿಯಾನದಲ್ಲಿ ಅನೇಕ ಚರ್ಚೆ ಮಾಡಿ ಮೀಸಲಾತಿ ಪಡೆಯಲು ಮುಂದಿನ ರೂಪುರೇಷೆ ಸಿದ್ಧಗೊಳಿಸಲಾಗುವುದು ಎಂದು ತಿಳಿಸಿದರು.

ಸಮಾಜದ ಮುಖಂಡ ಶಾಸಕ ಬಸನಗೌಡ ಯತ್ನಾಳ್ ಅವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದಾರೆ. ಅದರಂತೆ ಯತ್ನಾಳ್ ಅವರು ಬೆಳಗಾವಿಗೆ ಬಂದು ಈ ಬಗ್ಗೆ ಸಮುದಾಯದ ಜನರಿಗೆ ತಿಳಿಸಿದ್ದಾರೆ. ಬರುವ ಅಕ್ಟೋಬರ್ 1ರೊಳಗಾಗಿ ಸಮಾಜಕ್ಕೆ ಮೀಸಲಾತಿ ನೀಡಬೇಕು. ಇಲ್ಲವಾದರೆ ಯಾವುದೇ ಮನವಿ ಚರ್ಚೆಗೆ ಅವಕಾಶವಿಲ್ಲ. ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸ್ವಾಮೀಜಿ ಎಚ್ಚರಿಕೆ ರವಾನಿಸಿದರು.