ಮಂಗಳೂರು : ಕೊರೊನಾ ಸೋಂಕು ತಡೆಗೆ ಕೇಂದ್ರ, ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ವಿರುದ್ಧ ಕಾಂಗ್ರೆಸ್ ಮುಖಂಡರು ಸುಳ್ಳು ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಮಾಧ್ಯಮಗಳ ಮುಂದೆ ತಂತ್ರಗಾರಿಕೆ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಪಕ್ಷದ ಮುಖಂಡರು ಮಾಡುತ್ತಿಲ್ಲ. ಅದೇನಿದ್ದರೂ ರಾಹುಲ್ ಗಾಂಧಿ ಹಾಗೂ ಅವರ ತಂಡಕ್ಕೆ ಸೀಮಿತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಟಾಂಗ್ ಕೊಟ್ಟಿದ್ದಾರೆ.
ನಗರದ ಕೊಡಿಯಾಲಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ಈ ದೇಶದ ಜನರು, ಪ್ರಪಂಚದ ಎಲ್ಲ ದೇಶಗಳ ನಾಯಕರು ಮೆಚ್ಚಿದ್ದಾರೆ. ಆದ್ದರಿಂದ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಮೆಚ್ಚುಗೆಯಿಂದ ಆಗಬೇಕಾದದ್ದು ಏನೂ ಇಲ್ಲ ಎಂದು ಹೇಳಿದರು.
ದ.ಕ.ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಹಾಗೂ ರಮಾನಾಥ ರೈ ಅವರು ಸಾಮಾನ್ಯ ಜ್ಞಾನ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಗಳನ್ನು ನಮ್ಮ ಜಿಲ್ಲೆಯಲ್ಲಿ ಅನುಷ್ಠಾನ ಮಾಡುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಜಿಲ್ಲೆಯ ವಲಸೆ ಕಾರ್ಮಿಕರನ್ನು ಉಳಿಸಿಕೊಳ್ಳುವಲ್ಲಿ ಜಿಲ್ಲಾಡಳಿತಕ್ಕೆ ಇಚ್ಛಾಶಕ್ತಿ ಇಲ್ಲ ಎನ್ನುವ ಹೇಳಿಕೆಯನ್ನು ರಮಾನಾಥ ರೈ ಅವರು ಹೇಳಿದ್ದರು. ಹಾಗಾದರೆ ವಲಸೆ ಕಾರ್ಮಿಕರ ಬಿಡಾರಕ್ಕೆ ತೆರಳಿ ಅವರನ್ನು ಜಿಲ್ಲಾಡಳಿತದ ವಿರುದ್ಧ ಎತ್ತಿಕಟ್ಟಿದವರು ಯಾರು? ಎಂದು ಪ್ರಶ್ನಿಸಿದರು.
ಮತ್ತೋರ್ವ ಮಾಜಿ ಸಚಿವ ಯು.ಟಿ.ಖಾದರ್ ಸಂಸದ ನಳಿನ್ ಕುಮಾರ್ ಅವರು ಕಿಟ್ ಹಂಚುವಲ್ಲಿ ಬ್ಯುಸಿ ಆಗಿದ್ದಾರೆ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಸಂಸದರು ಕೊರೊನಾ ಆರಂಭದಲ್ಲೇ ತಮ್ಮ ಕಚೇರಿಯನ್ನು ಸಹಾಯವಾಣಿ ಕೇಂದ್ರವಾಗಿ ಮಾಡಿದ್ದಾರೆ. ಈ ಮೂಲಕ ಎಂಟು ವಿಧಾನಸಭಾ ಕ್ಷೇತ್ರಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಸಹಾಯವಾಣಿ ಮೂಲಕ ನೆರವೇರಿದೆ ಎಂದರು.‘
ಕಾಂಗ್ರೆಸ್ನವರಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಹುಡುಕಿ ನಾವು ಆಹಾರ ಕಿಟ್ಗಳನ್ನು ನೀಡಿಲ್ಲ. ನಾವು ಪಕ್ಷ, ಜಾತಿ, ಮತ ಭೇದಗಳನ್ನು ನೋಡಿ ಕಿಟ್ ಹಂಚಿಲ್ಲ. ವಿದೇಶಿ ಕನ್ನಡಿಗರು, ಹೊರ ರಾಜ್ಯದ ಕನ್ನಡಿಗರನ್ನು ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಸುದರ್ಶನ ಮೂಡುಬಿದಿರೆ ಆರೋಪಿಸಿದರು.