ಮಂಗಳೂರು: ರಾಜ್ಯಾದ್ಯಂತ ಈಗಾಗಲೇ ಮಾನ್ಸೂನ್ ಆರಂಭವಾಗಿದ್ದು, ಮೆಸ್ಕಾಂ ಯಾವುದೇ ಅವಘಡ ಸಂಭವಿಸದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ. ಈ ಬಾರಿ ಯಾವುದೇ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಅನಿರೀಕ್ಷಿತ ಅವಘಡಗಳು ಸಂಭವಿಸುತ್ತವೆ. ಇದಕ್ಕೆ ಕಡಿವಾಣ ಹಾಕಲು ಸಾಕಷ್ಟು ಅಧಿಕಾರಿಗಳನ್ನ ನಿಯೋಜನೆ ಮಾಡಲಾಗಿದೆ. ಪ್ರತಿ ಸೋಮವಾರ ಇದಕ್ಕಾಗಿ ಜಾಗ್ರತಾ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.
ಮಾರ್ಚ್ನಿಂದಲೇ ವಿದ್ಯುತ್ ತಂತಿಗೆ ಸ್ಪರ್ಶ ಮಾಡುವ ಮರಗಳ ಕೊಂಬೆಗಳನ್ನ ಕತ್ತರಿಸುವ ಕೆಲಸ ಮಾಡಲಾಗುತ್ತಿದೆ. ಅದಕ್ಕೆ ಬೇಕಾಗಿರುವ ಸುಮಾರು 500 ಜನರನ್ನ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಮೇ ಬಳಿಕ ಮತ್ತೆ 300ರಷ್ಟು ಜನರನ್ನ ನೇಮಕ ಮಾಡಲಾಗುತ್ತದೆ. ಅಲ್ಲದೆ, ಮಾನ್ಸೂನ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು 50ರಷ್ಟು ವಾಹನಗಳನ್ನ ಖರೀದಿಸಲಾಗಿದೆ. ಕಸ್ಟಮರ್ ಕೇರ್ ಸಂಖ್ಯೆಗಳನ್ನೂ ಅಧಿಕಗೊಳಿಸಲಾಗಿದ್ದು, ಬೆಳಗ್ಗೆ 10 , ಮಧ್ಯಾಹ್ನ 15, ರಾತ್ರಿ 12 ಜನರು ಸೇವೆಯಲ್ಲಿರುತ್ತಾರೆ. ದಿನಲೂ 300-400 ಕರೆಗಳು ಸ್ವೀಕಾರಗೊಳ್ಳುತ್ತಿದ್ದು, ಜನರ ಎಲ್ಲಾ ಸಮಸ್ಯೆಗಳಿಗೂ ತಕ್ಷಣ ಸ್ಪಂದನೆ ನೀಡಲಾಗುತ್ತದೆ ಎಂದರು.
ಇನ್ನು, ಮೆಸ್ಕಾಂ ವ್ಯಾಪ್ತಿಗೆ ಬರುವ ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪರಿವರ್ತಕಗಳ ದುರಸ್ತಿ, ವಾಹಕಗಳ ತುಂಡಾಗುವಿಕೆ ಸೇರಿ ಇತರ ಹಾನಿಗಳಿಂದ 12.2 ಕೋಟಿ ರೂ. ನಷ್ಟ ಸಂಭವಿಸಿದೆ. ಇದನ್ನು ಸಕಾಲದಲ್ಲಿ ದುರಸ್ತಿಗೊಳಿಸಲಾಗಿದೆ. ಕೆಲವೊಂದು ಕಡೆಗಳಲ್ಲಿ ಸಣ್ಣಪುಟ್ಟ ದುರಸ್ತಿ ಕೆಲಸಗಳು ಬಾಕಿಯಿದೆ. ಅದನ್ನ ಶೀಘ್ರದಲ್ಲಿ ಪರಿಹರಿಸಿಕೊಡಲಾಗುತ್ತದೆ. ಅದೇ ರೀತಿ ಎಲ್ಲಾ ಇಂಜಿನಿಯರ್ಗಳಿಗೂ ಸನ್ನದ್ಧರಾಗಿರಲು ತಿಳಿಸಿದ್ದೇವೆ ಎಂದರು.
ಮೆಸ್ಕಾಂ ವಿದ್ಯುತ್ ದರ ಏರಿಕೆ ಮಾಡಿದೆ ಎಂಬ ಜನರ ಆರೋಪವನ್ನ ತಳ್ಳಿ ಹಾಕಿದ ಸ್ನೇಹಲ್, ಮಾರ್ಚ್ ಹಾಗೂ ಏಪ್ರಿಲ್ ವಿದ್ಯುತ್ ಬಿಲ್ನ್ನ ಒಂದೇ ಬಾರಿಗೆ ನೀಡಲಾಗಿದೆ. ಹಿಂದಿನ ಮೂರು ತಿಂಗಳ ವಿದ್ಯುತ್ ದರವನ್ನ ನೋಡಿ, ಅದರ ಸರಾಸರಿ ಆಧಾರದ ಮೇಲೆ ಪ್ರತೀ ಮನೆಗೂ ಬಿಲ್ ಲಗತ್ತಿಸಲಾಗಿದೆ. ಮಾಮೂಲಿಯಾಗಿ 100 ಯುನಿಟ್ಸ್ ಬಿಲ್ ಬರುತ್ತಿದ್ದರೆ, ಅದನ್ನು ಎರಡು ತಿಂಗಳಿಗೆ ದ್ವಿಗುಣಗೊಳಿಸಲಾಗಿದೆ. ಅಲ್ಲದೆ, ಅದಾಗಲೇ ವಿದ್ಯುತ್ ದರ ಪಾವತಿ ಮಾಡಿದ್ದರೆ, ಅದನ್ನು ಬಿಲ್ನಲ್ಲಿ ಮೈನಸ್ ಮಾಡಿ ಕೊಡಲಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.