ಮಂಗಳೂರು: ಮಹಾರಾಷ್ಟ್ರ ಮೂಲದ ಮಣಿಪಾಲ ಕಾಲೇಜು ವಿದ್ಯಾರ್ಥಿನಿ ಜೊತೆಯಲ್ಲಿ ಮಂಗಳೂರಿನ ಶಾಪಿಂಗ್ ಮಾಲ್ಗೆ ತಿರುಗಾಡಲು ಬಂದ ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐವರು ಆರೋಪಿಗಳಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
![fine to five accused](https://etvbharatimages.akamaized.net/etvbharat/prod-images/4723143_thum.jpg)
ಕಾವೂರು ಜ್ಯೋತಿನಗರ ನಿವಾಸಿ ಚೇತನ್ (23), ಶೃಂಗೇರಿ ನೆಲ್ಲೂರು ನಿವಾಸಿ ರಕ್ಷಿತ್ ಕುಮಾರ್ (21), ಕಂದುಕ ನಿವಾಸಿ ಅಶ್ವಿನ್ರಾಜ್ (21), ಕಾರ್ಕಳ ಇನ್ನಾ ನಿವಾಸಿ ಸುಶಾಂತ್ ಶೆಟ್ಟಿ (23), ಕಾರ್ಸ್ಟ್ರೀಟ್ ನಿವಾಸಿ ಶರತ್ ಕುಮಾರ್ (28) ಶಿಕ್ಷೆಗೊಳಗಾದ ಆರೋಪಿಗಳು.
ಮಣಿಪಾಲದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಯುವತಿಯೊಬ್ಬಳನ್ನು ಉಡುಪಿಯ ಅನ್ಯಕೋಮಿನ ಯುವಕನೋರ್ವ ನಗರದ ಪಾಂಡೇಶ್ವರದ ಮಾಲ್ಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಸಿನಿಮಾ ನೋಡಿ ಬಳಿಕ ಮರಳಿ ಹೋಗಲು ರಿಕ್ಷಾ ಸ್ಟ್ಯಾಂಡ್ಗೆ ಹೋದಾಗ 5ಮಂದಿ ಯುವಕರ ತಂಡವೊಂದು ಇವರನ್ನು ತಡೆದು ಯುವಕನನ್ನು ದೇವಸ್ಥಾನ ಸಮೀಪ ಕರೆದೊಯ್ದಿದ್ದಾರೆ. ಬಳಿಕ ಅಕ್ರಮವಾಗಿ ಬಂಧನದಲ್ಲಿರಿಸಿ ರಾಡ್ನಿಂದ ಹಲ್ಲೆ ಮಾಡಿದ್ದರು.
ಇದರಿಂದ ಗಾಬರಿಗೊಂಡ ಯುವತಿ ಪಾಂಡೇಶ್ವರ ಠಾಣೆಗೆ ದೂರು ನೀಡುತ್ತಾಳೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಇನ್ಸ್ ಪೆಕ್ಟರ್ ಅನಂತಪದ್ಮನಾಭ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಕೋರ್ಟ್ ಹೇಳಿದ್ದೇನು?
ಪ್ರಕರಣವನ್ನು ಕೈಗೆತ್ತಿಕೊಂಡ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಯಿದುನ್ನೀಸಾ ವಿಚಾರಣೆ ನಡೆಸಿ, ಪ್ರಕರಣದಲ್ಲಿ 11 ಮಂದಿ ಸಾಕ್ಷಿದಾರರು, 17 ದಾಖಲೆಯನ್ನು ಪರಿಗಣಿಸಿದ್ದರು. ಆದರೆ ಕೋರ್ಟ್ ವಿಚಾರಣೆ ಹಂತದಲ್ಲಿ ಯುವತಿ ಸಾಕ್ಷಿ ಹೇಳಲು ಹಿಂದೇಟು ಹಾಕಿದ್ದಳು. ಆದರೂ ಆರೋಪ ಸಾಬೀತುಪಟ್ಟ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಐಪಿಸಿ 143ರಡಿಯಲ್ಲಿ (ಅಕ್ರಮ ಕೂಟ) 3ಸಾವಿರ ರೂ., ಐಪಿಸಿ 147(ಅಕ್ರಮ ಕೂಟದ ಹಲ್ಲೆ) 3ಸಾವಿರ ರೂ., ಐಪಿಸಿ 148ರಡಿ (ಮಾರಣಾಂತಿಕ ಆಯಧ ಬಳಕೆ) 3ಸಾವಿರ ರೂ., ಐಪಿಸಿ 342(ಅಕ್ರಮ ಬಂಧನ) 1ಸಾವಿರ ರೂ. ಐಪಿಸಿ 323ರಡಿ 1ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರತಿಯೊಬ್ಬ ಅಪರಾಧಿಯು 21 ಸಾವಿರ ರೂ. ದಂಡ ಕಟ್ಟಬೇಕು. ದಂಡ ತೆರಲು ತಪ್ಪಿದಲ್ಲಿ 8 ತಿಂಗಳ ಸಜೆ ಅನುಭವಿಸಬೇಕಾಗಿದೆ. ದಂಡದ ಮೊತ್ತದಲ್ಲಿ 50 ಸಾವಿರ ರೂ. ಯುವಕನಿಗೆ ಪರಿಹಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.