ದಕ್ಷಿಣ ಕನ್ನಡ: ಬಂಟ್ವಾಳ ತಾಲೂಕಿನ ಎರಡು ಕಡೆಗಳಲ್ಲಿ ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಕೆಲವರು ಅಡ್ಡಿಪಡಿಸಿರುವ ಘಟನೆ ನಡೆದಿರುವ ವಿಚಾರವಾಗಿ ಶಾಸಕರಿಗೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ಧಾರೆ.
ಕೊರೊನಾ ಸಂಬಂಧ ತಪಾಸಣೆ ಹಾಗೂ ಇನ್ನಿತರ ಕಾರ್ಯಗಳಿಗೆ ಸುಡುಬಿಸಿಲಿನಲ್ಲಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ತೆರಳುವ ಆಶಾ ಕಾರ್ಯಕರ್ತರಿಗೆ ಸರಿಯಾಗಿ ಮಾಹಿತಿ ನೀಡದಿರುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಹಲ್ಲೆ ನಡೆಸಿರುವ ಪ್ರಕರಣಗಳು ಹಲವೆಡೆ ಕೇಳಿಬಂದಿದೆ. ಬಂಟ್ವಾಳ ತಾಲೂಕಿನಲ್ಲೂ 2 ಕಡೆ ಇಂತದ್ದೇ ಘಟನೆ ನಡೆದಿದ್ದು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದ್ದಾರೆ.
ಬಂಟ್ವಾಳ ಪುರಸಭೆಯ ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಶಾಸಕ ರಾಜೇಶ್ ಅವರೊಂದಿಗೆ ದೂರವಾಣಿ ಮೂಲಕ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಕರಿಯಂಗಳ ಹಾಗೂ ಅಮ್ವಾಡಿ ಎರಡೂ ಗ್ರಾಮಗಳಲ್ಲಿ ಇದೇ ರೀತಿ ಘಟನೆ ಜರುಗಿದೆ ಎನ್ನಲಾಗಿದೆ.