ಮಂಗಳೂರು: ಕೊರೊನಾ ವೈರಸ್ ಹಾವಳಿ ಬಳಿಕ ರಕ್ತದಾನ ಮಾಡಲು ದಾನಿಗಳು ಮುಂದೆ ಬರುತ್ತಿರಲಿಲ್ಲ. ಆದ್ರೀಗ ಪರಿಸ್ಥಿತಿ ಬದಲಾಗಿದೆ. ವೈರಸ್ ಹಾವಳಿ ಕಡಿಮೆಯಾಗದಿದ್ದರೂ ಇದೀಗ ದಾನಿಗಳಲ್ಲಿ ಮಾತ್ರ ಹಿಂಜರಿಕೆ ಕಡಿಮೆಯಾಗಿದೆ.
ಪರರ ಜೀವ ಉಳಿಸಲು ರಕ್ತದಾನ ಮಾಡುವ ಹಲವು ಮಂದಿ ದಾನಿಗಳು ನಿಯಮಿತವಾಗಿ ರಕ್ತದಾನ ಮಾಡುತ್ತಲೇ ಇರುತ್ತಾರೆ. ಕೊರೊನಾ ವೈರಸ್ ಹಾವಳಿ ಬಳಿಕ ರಕ್ತದಾನಿಗಳಲ್ಲಿ ಕೊಂಚ ಭಯ ಸೃಷ್ಟಿಯಾಗಿ ರಕ್ತದಾನ ಮಾಡುವ ವೇಳೆ ವೈರಸ್ ತಮಗೂ ತಗುಲಬಹುದೆಂಬ ಆತಂಕ ಆವರಿಸಿತ್ತು. ಕೊರೊನಾ ಪ್ರಕರಣ ಇಳಿಮುಖವಾಗದಿದ್ದರೂ ಇದೀಗ ವೈರಸ್ ಮೇಲಿನ ಭಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಅದಕ್ಕೆ ಸೂಕ್ತ ಉದಾಹರಣೆಯಂತೆ, ಮಂಗಳೂರಿನ ಬ್ಲಡ್ ಬ್ಯಾಂಕ್ ಗಳಲ್ಲಿ ಇದೀಗ ಅವಶ್ಯಕತೆಗೆ ಬೇಕಾದಷ್ಟು ರಕ್ತದ ಸಂಗ್ರಹಗಳು ಲಭ್ಯ ಇವೆ.
ಕೊರೊನಾ ಸಂದರ್ಭದಲ್ಲಿ ರಕ್ತದಾನಿಗಳ ಸಂಖ್ಯೆ ಇಳಿಮುಖವಾಗಿದ್ದರೂ ಅಗತ್ಯದ ಸಂದರ್ಭದಲ್ಲಿ ನಗರದಲ್ಲಿರುವ ರಕ್ತ ದಾನಿಗಳ ಕೆಲವು ಸಂಘಟನೆಗಳು ಹಲವರ ಜೀವ ಉಳಿಸಿವೆ. ಇದೀಗ ರಕ್ತಸಂಗ್ರಹ ಹೆಚ್ಚಿಸುವ ದೃಷ್ಟಿಯಲ್ಲಿ ರಕ್ತದಾನದ ಕ್ಯಾಂಪ್ ಗಳನ್ನು ಮಾಡಿ ರಕ್ತದ ಕೊರತೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ.
ಕೊರೊನಾ ಸಂದರ್ಭದಲ್ಲಿ ರಕ್ತದ ಸಾಕಷ್ಟು ಸಂಗ್ರಹವಿಲ್ಲದೇ ಅಗತ್ಯ ಸಂದರ್ಭದಲ್ಲಿ ಬ್ಲಡ್ ಪೂರೈಕೆಗೆ ಆತಂಕವಿತ್ತು. ಅಂತಹ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಗ್ರೂಪ್ ಸೇರಿದಂತೆ ವಿವಿಧ ದಾನಿಗಳ ಸಹಕಾರದಿಂದ ಜೀವ ಉಳಿಸುವ ಕಾರ್ಯವಾಗಿದೆ. ಇದೀಗ ಮತ್ತೆ ರಕ್ತದಾನಕ್ಕೆ ಜನ ಮುಂದೆ ಬಂದಿರುವುದರಿಂದ ಆ ಆತಂಕವು ನಿವಾರಣೆಯಾಗಿದೆ.