ಮಂಗಳೂರು: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಹಾಗೂ ಮರದ ದಿಮ್ಮಿಗಳನ್ನು ಪೊಲೀಸರು ವಶಪಡಿಸಿ, ಓರ್ವನನ್ನು ಬಂಧಿಸಿದ ಘಟನೆ ತೆಕ್ಕಾರು ಗ್ರಾಮದ ಅಜಿಲ ಮೊಗ್ರು ಸೇತುವೆ ಬಳಿ ಇಂದು ಮಧ್ಯಾಹ್ನ ನಡೆದಿದೆ.
ಆರೋಪಿ ಪಿಕಪ್ ಚಾಲಕ ಶಾಂತಿಪ್ರಸಾದ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೋರ್ವ ಆರೋಪಿ ಹಕೀಂ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಯಾವುದೇ ದಾಖಲೆಗಳಿಲ್ಲದೆ ಅರಣ್ಯದ ಸೊತ್ತಾದ ಹಲಸಿನ ಮರದ ದಿಮ್ಮಿಗಳನ್ನು ಅಕ್ರಮವಾಗಿ ಎಲ್ಲಿಂದಲೊ ಕಳವು ಮಾಡಿ ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವಾಗ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸ್ವಾಧೀನಪಡಿಸಿಕೊಂಡಿರುವ ಮರದ ದಿಮ್ಮಿಗಳ ಅಂದಾಜು ಮೌಲ್ಯ 25,000 ರೂ.ಹಾಗೂ ಪಿಕಪ್ ವಾಹನದ ಮೌಲ್ಯ 1.15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.