ಮಂಗಳೂರು: ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಬಳಿಕ ಸರ್ಕಾರ ನೀಡಲುದ್ದೇಶಿಸಿದ ಗನ್ ಮ್ಯಾನ್ ಭದ್ರತೆಯನ್ನು ಮಾಜಿ ಸಚಿವ ಯು.ಟಿ. ಖಾದರ್ ನಿರಾಕರಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನನಗೆ ಗನ್ ಮ್ಯಾನ್ ಭದ್ರತೆ ನೀಡುವ ಬಗ್ಗೆ ಗೃಹ ಸಚಿವರು ಕರೆ ಮಾಡಿ ತಿಳಿಸಿದ್ದರು. ಆದರೆ ನಾನು ಬೇಡ ಎಂದು ಪೊಲೀಸ್ ಇಲಾಖೆಗೆ ಹೇಳಿದ್ದೇನೆ. ಈ ಹಿಂದೆ ಸಚಿವನಾಗಿದ್ದಾಗ ಸಾಮಾನ್ಯ ವ್ಯಕ್ತಿಯೊಬ್ಬ ಕರೆ ಮಾಡಿ, ಇಷ್ಟರತನಕ ನೀವು ಸಾಮಾನ್ಯ ಜನರಿಗೆ ಸಿಗ್ತಾ ಇದ್ರಿ, ಇನ್ನು ಪೊಲೀಸರು ಬಂದ ಬಳಿಕ ನಮಗೆ ನಿಮ್ಮ ಜೊತೆ ಮಾತನಾಡಲು ಆಗುತ್ತಾ? ಎಂದು ಹೇಳಿದ್ದರು. ಅವತ್ತಿನಿಂದ ನಾನು ಪೊಲೀಸ್ ಭದ್ರತೆಯನ್ನು ತೆಗೆದುಕೊಂಡಿಲ್ಲ ಎಂದರು.
ಸಚಿವನಾಗಿದ್ದಾಗ ಭದ್ರತೆಗಾಗಿ ಆಗಮಿಸುತ್ತಿದ್ದ ಪೊಲೀಸರು, ವಾಹನದಲ್ಲಿ ಇರುತ್ತಿದ್ದರೆ ಹೊರತು, ಮನೆಯಲ್ಲಿ ಇರುತ್ತಿರಲಿಲ್ಲ. ಈ ಹಿಂದೆ ಶಾಸಕನಾಗಿದ್ದಾಗಲು ಭದ್ರತೆ ಪಡೆದಿರಲಿಲ್ಲ. ಪೊಲೀಸರು ಇದ್ದರೆ ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ ಆದ್ದರಿಂದ ಗನ್ ಮ್ಯಾನ್ ಭದ್ರತೆ ನಿರಾಕರಿಸಿದ್ದೇನೆ. ನನಗೆ ನನ್ನ ಜೀವ ಮಾತ್ರ ಮುಖ್ಯವಲ್ಲ, ಜನರ ಜೀವವು ಮೌಲ್ಯವಾದದ್ದು, ನನಗೆ ಯಾವುದೇ ಬೆದರಿಕೆ ಇಲ್ಲ ಎಂದಿದ್ದಾರೆ.