ಮಂಗಳೂರು: ಲಾಕ್ಡೌನ್ನಿಂದ ಊರಿಗೆ ಹೋಗಲಾರದೆ ಮಂಗಳೂರಿನಲ್ಲಿ ನೆಲೆಸಿದ್ದ ಹೊರರಾಜ್ಯದ ವಲಸೆ ಕಾರ್ಮಿಕರಿಗೆ ಕೊನೆಗೂ ರೈಲು ಆರಂಭವಾಗಿದೆ. ಮಂಗಳೂರಿನಲ್ಲಿ ಇರುವ ಜಾರ್ಖಂಡ್ ರಾಜ್ಯದ ವಲಸೆ ಕಾರ್ಮಿಕರು ಇಂದು ಮೊದಲ ರೈಲಿನಲ್ಲಿ ಪ್ರಯಾಣ ಬೆಳೆಸಿದರು.
ಇಂದು ಸಂಜೆ 7 ಗಂಟೆಗೆ ಮೊದಲ ರೈಲು ಜಾರ್ಖಂಡ್ಗೆ ಪ್ರಯಾಣ ಬೆಳೆಸಿದ್ದು, 1240 ವಲಸೆ ಕಾರ್ಮಿಕರು ಊರಿಗೆ ಪ್ರಯಾಣ ಬೆಳೆಸಿದರು. ಸರ್ಕಾರ ರೈಲಿನ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ನಿನ್ನೆ ವದಂತಿ ನಂಬಿ ಮಂಗಳೂರು ರೈಲು ನಿಲ್ದಾಣಕ್ಕೆ ಸಾವಿರಾರು ವಲಸೆ ಕಾರ್ಮಿಕರು ಆಗಮಿಸಿದ್ದರು. ಅವರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಲಾಗಿತ್ತು. ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವರಿಗೆ ರೈಲು ವ್ಯವಸ್ಥೆ ಮಾಡುವಂತೆ ಪತ್ರ ಬರೆದಿದ್ದರು.
ಇಂದು ಜಾರ್ಖಂಡ್ಗೆ ಮೊದಲ ರೈಲು ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ಸೇವಾ ಸಿಂಧುವಿನಲ್ಲಿ ನೋಂದಾಯಿಸಿದ ವಲಸೆ ಕಾರ್ಮಿಕರನ್ನು ಕಳುಹಿಸಲಾಗಿದೆ. ವಲಸೆ ಕಾರ್ಮಿಕರನ್ನು 25 ಕೆಎಸ್ಆರ್ಟಿಸಿ ಬಸ್ ಮೂಲಕ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬಂದು ರೈಲಿಗೆ ಕಳುಹಿಸಲಾಗಿದೆ. ಅದಕ್ಕೂ ಮೊದಲು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಇವರ ಆರೋಗ್ಯ ತಪಾಸಣೆ ಮಾಡಲಾಗಿತ್ತು.