ಸುಬ್ರಹ್ಮಣ್ಯ: ಕಾಡಿನಿಂದ ಕೃಷಿ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು, ಇಲ್ಲಿನ ಕೃಷಿಕರೋರ್ವರ ಅಡಿಕೆ ತೋಟವನ್ನು ಬಹುಪಾಲು ನಾಶ ಪಡಿಸಿವೆ.
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಳಿಯ ರುದ್ರ ಫಾರ್ಮ್ಸ್ ತೋಟದಲ್ಲಿ ಕೃಷಿಕ ರವೀಂದ್ರ ರುದ್ರಪಾದ ಅವರ ಸುಮಾರು 600 ಅಡಿಕೆ ಗಿಡಗಳು ಆನೆಯ ದಾಳಿಗೆ ನೆಲಸಮಗೊಂಡಿವೆ. ಇಡೀ ತೋಟ ಆನೆ ದಾಳಿಗೆ ನಲುಗಿ ಹೋಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಆನೆಯನ್ನು ನಿಯಂತ್ರಿಸುವ ಬಗ್ಗೆ ಯಾವುದೇ ಕಾರ್ಯಾಚರಣೆ ಕೈಗೊಂಡಿಲ್ಲ.
ಪಶ್ಚಿಮಘಟ್ಟದ ಪುಷ್ಪಗಿರಿ ಅರಣ್ಯಧಾಮದಿಂದ ಇಳಿದು ಬರುತ್ತಿರುವ ಆನೆಗಳ ಹಿಂಡು, ಇಂತಹ ಹಾವಳಿಯ ಮೂಲಕ ಅಪಾರವಾದ ಬೆಳೆ ನಷ್ಟ ಮಾಡುತ್ತಿವೆ. ಕಳೆದ ಮೂರು ದಿನಗಳಿಂದ ರವೀಂದ್ರ ರುದ್ರಪಾದರವರ ರುದ್ರ ಫಾರ್ಮ್ಸ್ನಲ್ಲಿ ಈ ಆನೆ ಹಿಂಡು ದಾಳಿ ಇಡುತ್ತಿದ್ದರೂ ಅರಣ್ಯ ಇಲಾಖೆ ಆನೆಗಳನ್ನು ನಿಯಂತ್ರಿಸುವ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೃಷಿಕ ಆರೋಪಿಸಿದ್ದಾರೆ.
ಇಂತಹ ಆನೆಯ ದಾಳಿಗಳನ್ನು ತಪ್ಪಿಸುವುದು ಕೃಷಿಕರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವು ತಂದಿದೆ.