ಮಂಗಳೂರು: ಕಣಜ ಹುಳುವಿನ ದಾಳಿಯಿಂದ ಮಕ್ಕಳನ್ನು ರಕ್ಷಿಸಲು ಹೋದ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪ ನಡೆದಿದೆ. ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತಪಟ್ಟವರು. ಮಂಗಳೂರಿನ ಕಿನ್ನಿಗೋಳಿ ಬಳಿಯ ಶ್ರೀ ರಾಮ ಮಂದಿರ ಬಳಿ ಕಣಜದ ಹುಳು ಕಡಿದು ಇವರು ಮೃತಪಟ್ಟಿದ್ದಾರೆ.
ಬುಧವಾರ ಸಂಜೆ ಕಿನ್ನಿಗೋಳಿ ಬಳಿಯ ಶ್ರೀರಾಮ ಮಂದಿರ ಬಳಿ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಕಿನ್ನಿಗೋಳಿ ಪರಿಸರದ ಶಾಲೆಯ ಕೆಲ ಮಕ್ಕಳ ಮೇಲೆ ಕಣಜದ ಹುಳಗಳು ದಾಳಿ ಮಾಡಿದ್ದನ್ನು ಕಂಡಿದ್ದರು. ಕೂಡಲೇ ಸಂತೋಷ್ ಅವರು ಮಕ್ಕಳನ್ನು ಕಣಜದ ಹುಳುಗಳಿಂದ ರಕ್ಷಿಸಿ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಕ್ಕಳನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಕಣಜದ ಹುಳು ಸಂತೋಷ್ ಅವರಿಗೂ ಕಡಿದಿತ್ತು. ಆದರೆ, ಅದಕ್ಕೆ ಅವರು ಚಿಕಿತ್ಸೆ ಪಡೆಯದೇ ಮನೆ ಕಡೆ ತೆರಳಿದ್ದರು. ಮನೆಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಕುಳಿತ್ತಿದ್ದ ಸಂದರ್ಭದಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.