ದಕ್ಷಿಣ ಕನ್ನಡ: ಯಾವುದೇ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಕೊರೊನಾ ಜಾಗೃತಿಯ ಮಾತುಗಳು ಕೇಳಿ ಬರುತ್ತವೆ. ಆಯಾಯ ರಾಜ್ಯಗಳ ಭಾಷೆಯಲ್ಲಿ ಕೊರೊನಾ ಜಾಗೃತಿ ಸಂದೇಶವನ್ನು ಬಿತ್ತರಿಸಲಾಗುತ್ತದೆ. ಒಂದು ವೇಳೆ ಆ ಕೊರೊನಾ ಜಾಗೃತಿ ಸಂದೇಶ ಮಲೆಯಾಳಂನಲ್ಲಿದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜದ ಹೆಣ್ಣು ಮಗಳು ಟಿಂಟುಮೋಳ್ ಎಂಬಾಕೆಯ ಧ್ವನಿಯಾಗಿರುತ್ತದೆ.
ಕೋಟ್ಯಂತರ ಜನರು ಕೇಳುವಂತಹ ಇಂತಹ ಸುಳ್ಯ ತಾಲೂಕಿನ ಮರ್ಕಂಜದ ಟಿ.ವಿ.ಜೋಸೆಫ್ ಮತ್ತು ಆಲಿಸ್ ಜೋಸೆಫ್ ದಂಪತಿಯ ಪುತ್ರಿ ಟಿಂಟುಮೋಳ್ ಈ ಧ್ವನಿಯ ಒಡೆಯರು. ಮೂಲತಃ ಕೇರಳದವರಾದ ಇವರು ಸುಮಾರು 24 ವರ್ಷಗಳಿಂದ ಸುಳ್ಯ ತಾಲೂಕಿನಲ್ಲಿ ನೆಲೆಸಿದೆ.
ಕೊಟ್ಟಾಯಂ ಜಿಲ್ಲೆಯ ಪಾಲಾ ನಿವಾಸಿ ಟಿ.ವಿ ಜೋಸೆಫ್ 24 ವರ್ಷಗಳ ಹಿಂದೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಸುಳ್ಯದ ಗುತ್ತಿಗಾರಿಗೆ ಬಂದಿದ್ದರು. ನಂತರದಲ್ಲಿ ಅವರ ಕುಟುಂಬ ಸಮೇತ ಇಲ್ಲಿಗೆ ಬಂದು ವಾಸಿಸಲು ಆರಂಭಿಸಿದರು. ಬಳಿಕ ಸುಳ್ಯದ ಮರ್ಕಂಜಕ್ಕೆ ಬಂದಿದ್ದು, ಈ ದಂಪತಿಗೆ ಇಬ್ಬರು ಮಕ್ಕಳು. ಇವರಲ್ಲಿ ಮೊದಲ ಮಗಳೇ ಟಿಂಟುಮೋಳ್. ಇನ್ನೊಬ್ಬರು ಮಗ ಟಿಬಿನ್. ಇವರು ಸದ್ಯ ವಿದೇಶದಲ್ಲಿ ಇದ್ದಾರೆ. ಸುಳ್ಯಕ್ಕೆ ಬಂದು ನೆಲೆಸುವಾಗ ಟಿಂಟುಮೋಳ್ ಗೆ ಒಂಬತ್ತು ವರ್ಷ ವಯಸ್ಸು. ಇವರು ಈ ಸಮಯದಲ್ಲಿ ಕಡಬದ ಕ್ನಾನಾಯ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದರು.
ಮೊಡಂಕಾಪು ಇನ್ಫೆಂಟ್ ಜೀಸಸ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಬಳಿಕ ಮಂಗಳೂರಿನ ಸೈಂಟ್ ಅಗ್ನೇಸ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಪೂರೈಸಿ, ಐಎಎಸ್ ಪರೀಕ್ಷೆ ಬರೆಯುವ ಗುರಿಯೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿದರು. ನಂತರದಲ್ಲಿ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಸಂಬಂಧ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಈಗ ವಾಯ್ಸ್ ಆರ್ಟಿಸ್ಟ್ ಆಗಿ ಮಿಂಚುತ್ತಿದ್ದಾರೆ.
ಜೆಎನ್ಯು ವಿಶ್ವವಿದ್ಯಾನಿಲಯದ ಕನ್ನಡ ಪೀಠದ ಮುಖ್ಯಸ್ಥರಾಗಿದ್ದ ಸುಳ್ಯದವರೇ ಆದ ಡಾ. ಪುರುಷೋತ್ತಮ ಬಿಳಿಮಲೆಯವರು ಟಿಂಟುಮೋಳ್ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಮಾರ್ಗದರ್ಶನ ಹಾಗೂ ನೆರವು ನೀಡಿದವರು.
ದೆಹಲಿಯಲ್ಲಿನ ಕಲಿಕೆಯ ಖರ್ಚು ನಿಭಾಯಿಸಲು ಪಾರ್ಟ್ ಟೈಮ್ ಕೆಲಸವೊಂದರ ಅಗತ್ಯ ಟಿಂಟುಮೋಳ್ ಅವರಿಗಿತ್ತು. ಈ ವೇಳೆ ಅವರ ಕನ್ನಡ ಧ್ವನಿಯ ಶಕ್ತಿಯನ್ನು ಅರಿತಿದ್ದ ಡಾ.ಪುರುಷೋತ್ತಮ ಬಿಳಿಮಲೆಯವರು ಕನ್ನಡ ವಾಯ್ಸ್ ಓವರ್ ನೀಡುವಂತೆ ಸಲಹೆ ನೀಡಿ ಅವರನ್ನು ದೆಹಲಿಯಲ್ಲಿ ಖ್ಯಾತ ಕನ್ನಡ ವಾಯ್ಸ್ ಆರ್ಟಿಸ್ಟ್ ಆಗಿರುವ ಸರವು ಕೃಷ್ಣ ಭಟ್ ರವರಿಗೆ ಪರಿಚಯಿಸಿದರು. ಹಾಗೆ ಟಿಂಟುಮೋಳ್ ಅವರು ಕನ್ನಡ ಧ್ವನಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಒಂದೆರಡು ಬಾರಿ ಕನ್ನಡದ ಪ್ರಕಟಣೆಗಳಿಗೆ ಧ್ವನಿ ನೀಡಿದರು. ಇಷ್ಟೂ ಮಾತ್ರವಲ್ಲದೆ ಮಲಯಾಳಂ ಭಾಷೆಯಲ್ಲಿಯೂ ಪ್ರಾವೀಣ್ಯತೆ ಹೊಂದಿರುವ ಟಿಂಟುಮೋಳ್ ಗೆ ಮಲಯಾಳಂ ಅವಕಾಶವೂ ಲಭಿಸಿತು.
ದೂರದರ್ಶನ ಮಲಯಾಳಂನಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳಿಗೆ ಟಿಂಟು ಧ್ವನಿ ನೀಡಿದ್ದಾರೆ. ಲೈವ್ ಕಾರ್ಯಕ್ರಮಗಳು ನಡೆಸುವುದು ಇವರಿಗೆ ಕರಗತವಾದ ಕಲೆ. ಕೇಂದ್ರ ಸರಕಾರದ ಅನೇಕ ಪ್ರಕಟಣೆಗಳಿಗೆ ತನ್ನ ಶಬ್ದ ನೀಡಿದ್ದಾರೆ ಟಿಂಟುಮೋಳ್. ಸ್ವಚ್ಛ ಭಾರತ್ ಅಭಿಯಾನ್, ಭೀಮ್ ಯೋಜನೆ, ಭೇಟಿ ಬಚಾವೋ ಭೇಟಿ ಪಡಾವೋ, ಪ್ರಧಾನ ಮಂತ್ರಿ ಗ್ರಾಮೀಣ ಆವಾಝ್ ಯೋಜನೆ, ಜನಧನ್ ಯೋಜನೆ, ಅಂಚೆ, ವಿಮೆ, ಪಲ್ಸ್ ಪೋಲಿಯೋ ಸೇರಿದಂತೆ ಶಿಕ್ಷಣ, ಸೇರಿದಂತೆ ಆರೋಗ್ಯ ಜಾಗೃತಿಯ ಕಾರ್ಯಕ್ರಮಗಳಲ್ಲೂ ಟಿಂಟುಮೋಳ್ ಧ್ವನಿಯಾಗಿದ್ದಾರೆ. ಇಷ್ಟೂ ಮಾತ್ರವಲ್ಲದೆ ಉನ್ನತ ಬ್ರ್ಯಾಂಡ್ನ ಕಂಪೆನಿಗಳ ಪ್ರಕಟಣೆಗಳಿಗೆ ಇವರು ಧ್ವನಿ ನೀಡಿದ್ದಾರೆ.
ಹೀಗಿರುವಾಗ ದೇಶದಲ್ಲಿ ಕೊರೋನಾ ರೋಗದ ಆರ್ಭಟ ಆರಂಭವಾಯಿತು.ಕೇರಳದಲ್ಲೂ ಮೊದಲ ಕೊರೋನಾ ಪ್ರಕರಣ ದಾಖಲಾಯಿತು. ಈ ಸಮಯದಲ್ಲಿ ಖ್ಯಾತ ವಾಯ್ಸ್ ಆರ್ಟಿಸ್ಟ್ ಕಲಾಭವನ್ ಪ್ರಜಿತ್ ಅವರ ಸೂಚನೆಯಂತೆ ಕೊರೋನಾ ಕುರಿತ ಜಾಗೃತಿಯ ಪ್ರಕಟಣೆಗೆ ಹಿಂದಿಯಲ್ಲಿದ್ದ ಪ್ರಕಟನೆಯನ್ನು ಟಿಂಟುಮೋಳ್ ಮಲಯಾಳಂ ಭಾಷೆಗೆ ಅನುವಾದಿಸಿ ಧ್ವನಿ ನೀಡುತ್ತಾರೆ.ಈ ಶಬ್ದ ಟಿ.ವಿ. ಅಥವಾ ರೇಡಿಯೋಗಳಲ್ಲಿ ಮಾತ್ರ ಬರಬಹುದೆಂಬ ನಿರೀಕ್ಷೆ ಟಿಂಟುದಾಗಿತ್ತು. ಆದರೆ ಆದದ್ದೇ ಬೇರೆ, ಫೋನ್ ಸಂದೇಶವಾಗಿ ಈ ಧ್ವನಿ ಬದಲಾಯಿತು. ಇವಾಗ ಕೇರಳದ ಅಷ್ಟೂ ಫೋನ್ ಗಳಿಗೆ ಕರೆ ಮಾಡಿದರೂ ಕೇಳುವುದು ನಮ್ಮ ದಕ್ಷಿಣ ಕನ್ನಡದ ಕುವರಿ ಟಿಂಟುಮೋಳ್ ಅವರ ಸುಮಧುರ ಮಾತುಗಾರಿಕೆಯ ಧ್ವನಿ ಸಂದೇಶ.