ಮಂಗಳೂರು: ಎಂಆರ್ಪಿಎಲ್ನಿಂದ ನವೆಂಬರ್ ಅಂತ್ಯಕ್ಕೆ ಬೆಂಗಳೂರು ಮಂಗಳೂರು ಪೈಪ್ಲೈನ್ ಮೂಲಕ ಬಿಎಸ್ 6ಗ್ರೇಡ್ ಎಂಎಸ್ ಮತ್ತು ಎಚ್ಎಸ್ಡಿ ತೈಲ ಪೂರೈಕೆ ಆರಂಭಗೊಳ್ಳಲಿದೆ ಎಂದು ಎಂಆರ್ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2020ರ ಏಪ್ರಿಲ್ 1ರಿಂದ ದೇಶದಲ್ಲಿ ಬಿಎಸ್ 6 ಗ್ರೇಡ್ ನ ಎಂಎಸ್ ಮತ್ತು ಎಚ್ಎಸ್ಡಿ ತೈಲಬಳಕೆ ಕಡ್ಡಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಎಂಆರ್ಪಿಎಲ್ನಲ್ಲಿ ಈ ತೈಲ ಉತ್ಪಾದನೆ ಆರಂಭವಾಗಿದೆ ಎಂದರು. 35 ಸಾವಿರ ಕಿಲೋ ಲೀಟರ್ ತೈಲವು ಪೈಪ್ ಲೈನ್ ಮೂಲಕ ಸಾಗಿಸಬೇಕಾಗಿರುವುದರಿಂದ ನವೆಂಬರ್ ಅಂತ್ಯಕ್ಕೆ ಈ ಸಾಗಾಟ ಕಾರ್ಯ ಆರಂಭಗೊಳ್ಳಲಿದೆ. ಮಾರ್ಚ್ನೊಳಗೆ ತೈಲ ನಿಗದಿತ ಪೈಪ್ ಲೈನ್ ಮೂಲಕ ಘಟಕಗಳಿಗೆ ತಲುಪಲಿದೆ ಎಂದರು.
ಇತ್ತೀಚೆಗೆ ಸೌದಿಯಲ್ಲಿ ತೈಲ ನೆಲೆಗಳ ಮೇಲೆ ನಡೆದ ದಾಳಿಯಿಂದ ಎಂಆರ್ಪಿಎಲ್ಗೆ ಪೂರೈಕೆಯಾಗುವ ಕಚ್ಚಾತೈಲದಲ್ಲಿ ಯಾವುದೇ ಅಡಚಣೆಯಾಗಿಲ್ಲ ಎಂದರು. ಮಳೆಯಾದ ಸಂದರ್ಭದಲ್ಲಾದ ಭೂಕುಸಿತದಿಂದ ಪೈಪ್ಲೈನ್ಗೆ ಹಾನಿಯಾಗಿ ಅಗಷ್ಟ್ 2ನೇ ವಾರದಲ್ಲಿ ಎಂಆರ್ಪಿಎಲ್ನ 3ನೇ ಹಂತದ ಕಾಂಪ್ಲೆಕ್ಸ್ ರಿಫೈರಿ ಕಾರ್ಯವನ್ನು ಸುರಕ್ಷತೆಯ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿತ್ತು. ಸುಮಾರು 40 ದಿನಗಳ ಸುರಕ್ಷಾ ಕ್ರಮ ಕೈಗೊಂಡ ಬಳಿಕ ಪುನರ್ ಆರಂಭಿಸಲಾಗಿದೆ. ಎಂಆರ್ಪಿಎಲ್ 2019-20 ನೇ ಸಾಲಿನಲ್ಲಿ ತನ್ನ ಸಿಎಸ್ಆರ್ ನಿಧಿಯಡಿ 50 ಕೋಟಿ ರೂ. ಗಳನ್ನು ವ್ಯಯಿಸಿದೆ ಎಂದರು.
ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸುವ ಯೋಜನೆ ಪ್ರಕ್ರಿಯೆಯಲ್ಲಿದ್ದು 2020ರ ಅಗಷ್ಟ್ನೊಳಗೆ ಯಾಂತ್ರಿಕ ಕಾರ್ಯಗಳು ಪೂರ್ಣಗೊಳ್ಳಲಿದೆ. ಈ ನಡುವೆ ಮುಂದಿನ ಮಾರ್ಚ್ನಿಂದ ಜೂನ್ನ ಬೇಸಿಗೆಯ ಅವಧಿಯಲ್ಲಿ ಕಂಟೈನರ್ ಉಪ್ಪು ನೀರು ಸಂಸ್ಕರಣಾ ಘಟಕಗಳನ್ನು ಪಡೆಯಲು ಎಂಆರ್ಪಿಎಲ್ ನಿರ್ಧರಿಸಿದೆ ಎಂದರು.