ಚಿತ್ರದುರ್ಗ: 2023ರ ವಿಧಾನಸಭಾ ಚುನಾವಣೆಗೆ ಶಿರಾ, ಹೊಸದುರ್ಗ, ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಎಲ್ಲಿ ನಿಲ್ಲಬೇಕು ಎಂಬ ಬಗ್ಗೆ ಪಕ್ಷ ತೀರ್ಮಾನಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಹೊಸದುರ್ಗದ ಯುವಕರು ಬೈಕ್ ರ್ಯಾಲಿ ಮಾಡುವ ಮೂಲಕ ಬಿ. ವೈ ವಿಜಯೇಂದ್ರ ಅವರನ್ನು ಅದ್ದೂರಿ ಸ್ವಾಗತ ಮಾಡಿದರು. ಹೊಸದುರ್ಗ ಪಟ್ಟಣದಲ್ಲಿ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಅವರು ನೂತನವಾಗಿ ಆರಂಭಿಸಿರುವ ಜನಸಂಪರ್ಕ ಕಚೇರಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪಕ್ಷ ಏನು ಜವಾಬ್ದಾರಿ ಕೊಡುತ್ತದೆ. ಅದನ್ನ ನಿಭಾಯಿಸಿಕೊಂಡು ಹೋಗುತ್ತೇನೆ. ಜನಸೇವೆ ಮಾಡಲು ಯಾವುದೇ ಸ್ಥಾನಮಾನ ಬೇಕಿಲ್ಲ ಎಂದರು.
ಹೊಸದುರ್ಗದಲ್ಲಿ ಲಿಂಗಮೂರ್ತಿ ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳಿಂದ ಜನಸೇವೆ ಮಾಡುತ್ತಾ ಬಂದಿದ್ದಾರೆ. ಹಾಗಾಗಿ, ಅವರು ಜನಸಂಪರ್ಕ ಕಚೇರಿ ಆರಂಭಿಸಿದ್ದಾರೆ. ಇನ್ನು ಮುಂಬರುವ ಚುನಾವಣೆಗೆ ಯಾರು ನಿಲ್ಲಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದರು. ಈ ಕಾರ್ಯಕ್ರಮಕ್ಕೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಗೈರಾಗಿದ್ದರ ಕುರಿತು ಪ್ರತಿಕ್ರಿಯಿಸಿ, ಅವರು ಯಾವುದೋ ಕೆಲಸದ ಮೇಲೆ ಹೋಗಿದ್ದಾರೆ. ಅವರೂ ಕೂಡ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಗೈರಾದ ಮಾತ್ರಕ್ಕೆ ಭಿನ್ನಮತ ಎಂದು ಅರ್ಥೈಸಬೇಕಾಗಿಲ್ಲ ಎಂದು ಸಮರ್ಥಿಸಿಕೊಂಡರು.
ಹೊಸದುರ್ಗದ ಜನರು ಬೈಕ್ ರ್ಯಾಲಿ ಮಾಡುವ ಮೂಲಕ ನನ್ನನ್ನು ಸ್ವಾಗತಿಸಿದ್ದಾರೆ. ಬಹಳ ಸಂತೋಷವಾಯಿತು. ಅವರ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು. ರಾಜ್ಯದಲ್ಲಿ ವಿವಾದ ಸೃಷ್ಟಿಸಿರುವ ಶಾಲಾ ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಊಹಾ- ಪೋಹಗಳ ಮೇಲೆ ಅನಗತ್ಯ ಚರ್ಚೆ ಹುಟ್ಟುಹಾಕುತ್ತಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರ ಜೊತೆ ಚರ್ಚಿಸಿ ಗೊಂದಲಗಳನ್ನು ಪರಿಹರಿಸುತ್ತಾರೆ. ಶಿಕ್ಷಣ ಸಚಿವರು ಮಠಾಧೀಶರನ್ನು ಭೇಟಿ ಮಾಡಿದ್ದು, ಶ್ರೀಗಳಿಗಿದ್ದ ಊಹಾಪೋಹದ ಗೊಂದಲಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈ ವಿಚಾರವಾಗಿ ಸಚಿವರ ಮನೆ ಮುಂದೆ ಗಲಭೆ ಸೃಷ್ಟಿಸುವುದು ತಪ್ಪು ಎಂದು ವಿಜಯೇಂದ್ರ ಹೇಳಿದರು.