ಚಿಕ್ಕಮಗಳೂರು: ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೊಳಪಟ್ಟ ಅದೆಷ್ಟೋ ಕುಗ್ರಾಮಗಳಿಂದು ಖಾಸಗಿಯವರ ಹೃದಯ ವೈಶಾಲ್ಯತೆಯಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇಂಥ ಮಹತ್ತರ ಕೆಲಸ ಮಾಡುತ್ತಾ ಬಂದಿರುವ ಹೆಗ್ಗಳಿಕೆಗೆ ಪೇಜಾವರ ಮಠವೂ ಭಾಜನವಾಗಿದೆ. ಏಕೆಂದರೆ ಈ ಮಠ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೂಲಭೂತ ಸೌಕರ್ಯ ಗಳಿಂದ ವಂಚಿತವಾಗಿರುವ ಅದೆಷ್ಟೋ ಪ್ರದೇಶಗಳ ಜನರಿಗೆ ಜೀವನ ರೂಪಿಸಿಕೊಟ್ಟಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಅನೇಕ ಗ್ರಾಮಗಳು ನಕ್ಸಲ್ ಪೀಡಿತ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದವು. ಸರ್ಕಾರ ಬಿಡುಗಡೆ ಮಾಡತೊಡಗಿದ ಅದೆಷ್ಟೋ ಲಕ್ಷಗಳ ನಕ್ಸಲ್ ಪ್ಯಾಕೇಜ್ ಸಹ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಸಂದಿಲ್ಲ. ಇದನ್ನೇ ನಕ್ಸಲರು ಬಂಡವಾಳವಾಗಿಟ್ಟುಕೊಂಡು ಅಮಾಯಕ ಗ್ರಾಮಸ್ಥರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಸುತ್ತಿರುವುದನ್ನು ಮನಗಂಡು ಉಡುಪಿಯ ಪೇಜಾವರ ಮಠ ಕೈಗೆತ್ತಿಕೊಂಡ ಯೋಜನೆಯೇ ಗ್ರಾಮೋತ್ಥಾನ ಪರಿಕಲ್ಪನೆ. ಇದರ ಅನ್ವಯ ಈವರೆಗೂ 300ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸೌಲಭ್ಯ ದೊರೆತಿದೆ. ಮಕ್ಕಳಿಗೆ ಲಕ್ಷಾಂತರ ರೂಪಾಯಿ ವಿದ್ಯಾರ್ಥಿವೇತನ ಪೂರೈಕೆಯಾಗಿದೆ. ಜಿಲ್ಲೆಯ ಕೊಪ್ಪದ ಮೆಣಸಿನಹಾಡ್ಯ, ಕಳಸದ ಕೆಲ ಗ್ರಾಮಗಳ 130 ಮನೆಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ಸಂಪರ್ಕಕ್ಕೆ ಶ್ರೀಗಳೇ ಕಾರಣ.
ಮಲೆನಾಡಿನ ಕುಗ್ರಾಮಗಳಲ್ಲಿ ಹೆಜ್ಜೆ ಹಾಕಿದ ಪೇಜಾವರ ಶ್ರೀಗಳು ಗಿರಿಜನರಿಗೆ ಅಗತ್ಯವಾಗಿ ಬೇಕಾಗಿರುವ ಪಾತ್ರೆ, ಮೂಲಭೂತ ಸಾಮಾಗ್ರಿಗಳನ್ನು ವಿತರಣೆ ಮಾಡಿದ್ದರು. ಮಠದಿಂದ 2 ಕೋಟಿಗೂ ಅಧಿಕ ವೆಚ್ಚದಲ್ಲಿ ನಾಲ್ಕು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕ್ರಾಂತಿಯನ್ನೇ ಮೂಡಿಸಿದರು. ಇನ್ನು ಮುಂದುವರಿದ ಭಾಗವಾಗಿ ನಕ್ಸಲ್ ಶರಣಾಗತಿಗೆ ಪೇಜಾವರ ಶ್ರೀಗಳು ಮುನ್ನಡೆಯನ್ನು ಬರೆದಿದ್ದರು. ಇದರ ಭಾಗವಾಗಿ ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಪ್ಯಾಕೇಜ್ ನ ಅಡಿಯಲ್ಲಿ ನಾಲ್ವರು ಕಾಡಿನಿಂದ ನಾಡಿಗೆ ಮುಖ ಮಾಡಿದರು. 2010 ರ ಸಿಎಂ ಯಡಿಯ್ಯೂರಪ್ಪನವರ ಅವಧಿಯಲ್ಲಿ ನಾಲ್ಕು ಮಂದಿ ನಕ್ಸಲರು ಶರಣಾಗತಿ ಆಗುವಲ್ಲಿ ಶ್ರೀ ಪಾತ್ರ ದೊಡ್ಡದು.