ಚಿಕ್ಕಮಗಳೂರು: ವ್ಯಕ್ತಿಯ ಮೃತ ದೇಹವನ್ನು ಸ್ಮಶಾನಕ್ಕೆ ಸಾಗಿಸಲು ದಾರಿ ಇಲ್ಲದೇ ಎರಡು ದಿನಗಳ ಕಾಲ ಆ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಸಮೀಪದ ಎಸ್. ಬೊಮ್ಮೇನಹಳ್ಳಿಯಲ್ಲಿ ನಡೆದಿದೆ.
ಮೃತ ದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ದಾರಿ ಇಲ್ಲದೆ ಜನ ಪರದಾಡಿದ್ದು, ಎರಡು ದಿನಗಳ ಬಳಿಕ ಅಂತ್ಯಸಂಸ್ಕಾರ ಮಾಡಿದ್ದಾರೆ. ಕಡೂರು ತಾಲೂಕಿನ ಚಿಕ್ಕ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್. ಬೊಮ್ಮನಹಳ್ಳಿಯಲ್ಲಿ 55 ವರ್ಷದ ಪ್ರಮೋದ್ ಎಂಬುವರ ಮೃತಪಟ್ಟಿದ್ದರು. ಬಹಳ ವರ್ಷಗಳ ನಂತರ ದೇವನೂರು ಕೆರೆ ತುಂಬಿ ಅಪಾರ ಪ್ರಮಾಣದ ನೀರು ಹಲವು ಕಡೆಯಿಂದ ಹರಿದು ಹೋಗುತ್ತಿದೆ.
![Dead body left at home for 2 days due to heavy rain](https://etvbharatimages.akamaized.net/etvbharat/prod-images/kn-ckm-02-smashana-deadbody-av-7202347_07092022124018_0709f_1662534618_263.jpg)
ಈ ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ದಾರಿಯೂ ನೀರಿನಿಂದ ಜಲಾವೃತವಾಗಿತ್ತು. ಇದರಿಂದ ಮೃತದೇಹ ಕೊಂಡೊಯ್ಯಲು ಸಾಧ್ಯವಾಗದೆ ಮಂಗಳವಾರ ಬೆಳಗ್ಗೆ ತನಕವೂ ಕಾದಿದ್ದಾರೆ. ಹಳ್ಳದಲ್ಲಿ ನೀರು ಹಾಗೂ ಹಳ್ಳಕ್ಕೆ ಹರಿದು ಬರುತ್ತಿದ್ದ ನೀರು ಹೆಚ್ಚಿದ್ದ ಕಾರಣ ಮಧ್ಯಾಹ್ನದವರೆಗೂ ಕಾದಿದ್ದಾರೆ.
![Dead body left at home for 2 days due to heavy rain](https://etvbharatimages.akamaized.net/etvbharat/prod-images/kn-ckm-02-smashana-deadbody-av-7202347_07092022124018_0709f_1662534618_632.jpg)
ಮಧ್ಯಾಹ್ನದ ಹೊತ್ತಿಗೆ ನೀರು ತುಸು ಕಡಿಮೆಯಾದ ಕಾರಣ ಸೊಂಟದ ತನಕ ಹರಿಯುತ್ತಿದ್ದ ನೀರಿನಲ್ಲೇ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಶವ ಹೂಳಲು ಗುಂಡಿ ತೆಗೆಯಲು ಜೆಸಿಬಿ ಯಂತ್ರ ತರಿಸಿದರೆ ಅದು ಕೂಡ ಕೆಸರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡು ಪರದಾಡಿದ್ದಾರೆ. ನಂತರ ಎರಡ್ಮೂರು ಕಡೆ ಗುಂಡಿ ತೆಗೆದರೂ ಅಲ್ಲಿ ನೀರು ಬಂದು ತುಂಬಿಕೊಳ್ಳುತ್ತಿತ್ತು. ನಂತರ ಸ್ವಲ್ಪ ಎತ್ತರದ ಭಾಗದಲ್ಲಿ ಗುಂಡಿ ತೆಗೆದು ಅಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ.
![Dead body left at home for 2 days due to heavy rain](https://etvbharatimages.akamaized.net/etvbharat/prod-images/kn-ckm-02-smashana-deadbody-av-7202347_07092022124018_0709f_1662534618_202.jpg)
ಈ ಗ್ರಾಮದಲ್ಲಿ ಈ ಸಮಸ್ಯೆ ಇಂದು-ನಿನ್ನೆಯದ್ದಲ್ಲ. ಕಳೆದ 10 ವರ್ಷಗಳಿಂದಲೂ ಇದೇ ಸಮಸ್ಯೆ ಇದೆ. ಜನಪ್ರತಿನಿಧಿಗಳ ಬಳಿ ಹಲವು ಬಾರಿ ಈ ಸಮಸ್ಯೆ ಬಗ್ಗೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಯಾರದೋ ತಪ್ಪಿಗೆ ನಾಯಿ ಪಾಲಾದ ಶಿಶು.. ಹೆಣ್ಣೆಂದು ಬಿಸಾಡಿದ್ರಾ ಹೆತ್ತವರು!?