ಚಿಕ್ಕಮಗಳೂರು: ಬೇಸಿಗೆಯಲ್ಲಿ ಎಲ್ಲಿಗೆ ಟೂರ್ ಪ್ಲಾನ್ ಮಾಡ್ಬೇಕು ಅಂತ ಯೋಚಿಸ್ತಿದ್ದೀರಾ... ಪ್ರೇಕ್ಷಣೀಯ ಸ್ಥಳಗಳಿಗಾಗಿ ಜಾಸ್ತಿ ಹುಡುಕಾಡಬೇಡಿ. ನೇರವಾಗಿ ಚಿಕ್ಕಮಗಳೂರಿಗೆ ಬಂದುಬಿಡಿ...
ಹೌದು, ನಿಮ್ಮನ್ನು ಆಮಂತ್ರಿಸಲೆಂದೇ ಸದಾ ಹಸಿರು ಹೊದ್ದು ಕಂಗೊಳಿಸುವ ಪ್ರಕೃತಿ, ಮುಗಿಲು ಚುಂಬಿಸುವ ಗಿರಿ ಶಿಖರಗಳು, ಹಾಲಿನ ನೊರೆಯುಗುಳುತ್ತಾ ಹರಿಯುವ ನದಿ, ಝರಿಗಳು ಇದಕ್ಕಾಗೇ ಸಿದ್ಧಗೊಂಡಿವೆ.
ಚಿಕ್ಕಮಗಳೂರು ನಗರದಿಂದ ಮುಳ್ಳಯ್ಯನ ಗಿರಿ ಕಡೆ ಪ್ರವಾಸಕ್ಕೆ ಹೊರಟರೆ ಹತ್ತು ಹಲವಾರು ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದು. ಸುಂದರವಾದ ನಿಸರ್ಗ, ಕಾಡುಮೇಡುಗಳಲ್ಲಿ ಜುಳು ಜುಳು ಹರಿಯುವ ನದಿ, ತೊರೆಗಳು ನಿಮ್ಮ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಸಗೀರ್ ಪಾಲ್ಸ್, ಝರಿ ಪಾಲ್ಸ್, ನೆತ್ತಿಖಾನ್ ಬಳಿ ಕಾಫೀ ತೋಟದಲ್ಲಿರುವ ಫಾಲ್ಸ್ ಹಾಗೂ ಹೊನ್ನಮ್ಮನ ಹಳ್ಳದ ಝರಿ ಇವು ವರ್ಷ ಪೂರ್ತಿ ತುಂಬಿ ಹರಿಯುವ ಜಲಪಾತಗಳಾಗಿವೆ.
ಬಿರಿ ಬೇಸಿಗೆಯಲ್ಲೂ ಮೈತುಂಬಿ ನಲಿದಾಡುವ ಈ ಜಲಪಾತಗಳ ನೀರಿನ ಮೂಲ ಈವರೆಗೆ ನಿಗೂಢ. ಆಗಾಗ್ಗೆ ನೀರಿನ ಮಟ್ಟದಲ್ಲಿ ಕೊಂಚ ಕಡಿಮೆಯಾದರೂ ಹರಿಯುವುದು ಮಾತ್ರ ಎಂದಿಗೂ ನಿಂತಿಲ್ಲ. ಇನ್ನು ರಮ್ಯ ತಾಣ ಚಂದ್ರದ್ರೋಣ ಪರ್ವತದಂತಹ ಹಲವು ಗಿರಿಶಿಖರಗಳು ಆಕರ್ಷಣೀಯ ತಾಣಗಳು.
ಈಗಾಗಲೆ ಬೇಸಿಗೆ ರಜೆ ಕಾರಣ ನೂರಾರು ಮಂದಿ ಈ ಪ್ರೇಕ್ಷಣೀಯ ತಾಣಗಳಿಗೆ ಭೇಟಿ ನೀಡಿ, ಎಂಜಾಯ್ ಮಾಡುತ್ತಿದ್ದಾರೆ.