ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಲವು ಧಾರ್ಮಿಕ ಕೇಂದ್ರಗಳಿವೆ. ಪ್ರಸಿದ್ಧ ಸಿದ್ಧಾರೂಢ ಮಠ, ಮೂರುಸಾವಿರ ಮಠ, ಶಿರೂರು ಪಾರ್ಕ್ನ ತದ್ರೂಪಿ ಅಯ್ಯಪ್ಪಸ್ವಾಮಿ ಮಂದಿರ, ಜೈನ ಮಂದಿರಗಳು, ವರೂರಿನ ನವಗ್ರಹ ತೀರ್ಥ, ಐತಿಹಾಸಿಕ ಉಣಕಲ್ ಚಂದ್ರಮೌಳೇಶ್ವರ ದೇವಸ್ಥಾನ ಇವೆ. ಈ ಐತಿಹಾಸಿಕ ಹಾಗೂ ನವ್ಯ ಹಲವು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಇದೀಗ ಮತ್ತೊಂದು ಭವ್ಯ ಮಂದಿರ ಸೇರ್ಪಡೆಯಾಗಿದ್ದು, ಭಕ್ತರನ್ನು ಸೆಳೆಯುತ್ತಿದೆ.
ಒಂದೇ ಕಡೆ ಹಲವು ದೇಗುಲ ; ತಾಲೂಕಿನ ಪಾಲಿಕೊಪ್ಪ ಬಳಿ ಪುಣೆ-ಬೆಂಗಳೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ 'ಶಿವಶಕ್ತಿಧಾಮ'ವು ಭಕ್ತಗಣವನ್ನು ಕೈಬೀಸಿ ಕರೆಯುತ್ತಿದೆ. ಆಕರ್ಷಕ ದೇಗುಲ, ವಿಶಾಲ ದೇವಸ್ಥಾನದ ಆವರಣ ಕಣ್ಮನ ಸೆಳೆಯುತ್ತಿದೆ. ಶಿವನ ಭವ್ಯ ಮಂದಿರ ಇದೀಗ ಪ್ರಥಮ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ಈ ದೇವಾಲಯ ಹಲವು ವಿಶೇಷತೆಗಳಿಂದ ಕೂಡಿದೆ. ಸಂಪೂರ್ಣ ಶಿಲೆಯಲ್ಲಿ ನಿರ್ಮಿಸಲಾದ ಈ ದೇವಸ್ಥಾನವು ವಿಶೇಷತೆ ಕೂಡಿದೆ. ವಿಶಾಲವಾದ ದೇವಸ್ಥಾನದ ಆವರಣದಲ್ಲಿ ಶ್ರೀ ಆನಂದೇಶ್ವರ (ಶಿವ), ಶ್ರೀ ವಿಜಯಗಣಪತಿ (ಗಣೇಶ) ಹಾಗೂ ಜ್ಞಾನಾಂಬಿಕೆ (ಪಾರ್ವತಿ) ಹೀಗೆ ವಿವಿಧ ದೇಗುಲಗಳು ಇಲ್ಲಿವೆ.
ಒಂದೇ ಜಾಗದಲ್ಲಿ ಹಲವು ದೇವರನ್ನು ಕಾಣುವ ಮೂಲಕ ಭಕ್ತಿ ಸಮರ್ಪಿಸಿ ಕೃತಾರ್ಥರಾಗುವ ಅವಕಾಶ ಇಲ್ಲಿ ಸಿಗಲಿದೆ. ಇಲ್ಲಿ ನಿರ್ಮಾಣವಾದ ಪ್ರತಿಯೊಂದು ದೇವಸ್ಥಾನಗಳು ವಿಶಿಷ್ಟ ಹಾಗೂ ಪರಂಪರೆಯನ್ನು ಸಾರುವಂತಿವೆ. ಶಿವ ದೇವಸ್ಥಾನವನ್ನು ಆಗಮ ಶಿಲ್ಪ ಶಾಸ್ತ್ರದ ಪ್ರಕಾರ ಸಂರಚನೆ ಮಾಡಿ ನಿರ್ಮಿಸಲಾಗಿದೆ. ವಾಸ್ತುವಿನ ಪ್ರಕಾರ ಹಾಗೂ ಯಾವ ಸ್ಥಾನ ಯಾವ ದೇವರಿಗೆ ಶ್ರೇಷ್ಠ ಎಂಬುದನ್ನು ಪರಿಶೀಲಿಸಿ ಪ್ರತಿಷ್ಠಾಪನೆ ಮಾಡಲಾಗಿದೆ. ಮುಖ್ಯವಾಗಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ತಳಭಾಗದಲ್ಲಿ ಶಿವಲಿಂಗವು ಚೌಕಾಕಾರದಲ್ಲಿ ನಿರ್ಮಿಸಲಾಗಿದೆ. ಏಕಶಿಲೆಯ ಮೂರ್ತಿ ಇದಾಗಿದೆ.
![Navagraha temple](https://etvbharatimages.akamaized.net/etvbharat/prod-images/11-02-2025/23519914_thumbnajghjghj.jpg)
ಈ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ ಭಟ್ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಿಂದ ಪಿ. ಬಿ ರಸ್ತೆ ಮೂಲಕ ಹಾವೇರಿಯತ್ತ ಹೋಗುವಾಗ ಹೊರವಲಯದ ಪಾಲಿಕೊಪ್ಪ ಬಳಿ ಬಲ ಬದಿಯಲ್ಲಿ ವಿಶಾಲ ಹಾಗೂ ಭವ್ಯ ಮಂದಿರವನ್ನು ಉದ್ಯಮಿ ವಿಜಯ ಸಂಕೇಶ್ವರ ಒಡೆತನದ ವಿಆರ್ಎಲ್ ಸಂಸ್ಥೆ ನಿರ್ಮಿಸಿ, ಶೃಂಗೇರಿ ಮಠಕ್ಕೆ ದಾನವಾಗಿ ನೀಡಿದೆ. ಆರು ಎಕರೆ ಜಮೀನಿನಲ್ಲಿ ಬೃಹತ್ ದೇವಾಲಯ ನಿರ್ಮಿಸಲಾಗಿದ್ದು, ಭಕ್ತರು ತನು-ಮನವನ್ನು ಸಂತೈಸುವ ತಾಣವಾಗಿದೆ ಎಂದರು.
ದ್ರಾವಿಡ ಶೈಲಿಯಲ್ಲಿ ನಿರ್ಮಾಣ ; ಅತ್ಯಂತ ಸುಂದರ ಹಾಗೂ ಹಸಿರು ಉದ್ಯಾನದ ಮಧ್ಯ ತಲೆಎತ್ತಿರುವ ಮಂದಿರ ಆಹ್ಲಾದಕರ ವಾತಾವರಣದಲ್ಲಿ ಭಕ್ತರಿಗೆ ತಂಪೆರೆಯುತ್ತದೆ. ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನಗಳ ಪ್ರಾಂಗಣದಲ್ಲಿ ಶಿವ ದೇವಾಲಯ, ಪಾರ್ವತಿ ದೇವಾಲಯ, ಗಣಪತಿ, ಶನೈಶ್ಚರ, ನವಗ್ರಹ, ಕಾಲಭೈರವ ದೇವಸ್ಥಾನಗಳಿವೆ. ಆವರಣದಲ್ಲಿ ಒಂದು ಸುತ್ತು ಹಾಕಿದರೆ ಎಲ್ಲ ದೇವರ ದರ್ಶನ ಪಡೆದು ಪುನೀತರಾಗುವ ತಾಣ ಇದಾಗಿದೆ ಎಂದು ಹೇಳಿದರು.
![Vijaya Ganapathi Temple](https://etvbharatimages.akamaized.net/etvbharat/prod-images/11-02-2025/23519914_thumbnghfhh.jpg)
ವಾರಾಂತ್ಯದಲ್ಲಿ ಭಕ್ತರ ದಂಡು ; ಕಳೆದ ವರ್ಷ ಫೆಬ್ರವರಿಯಲ್ಲಿ ಉದ್ಘಾಟನೆಯಾದ ನಂತರ ದೇವಸ್ಥಾನಕ್ಕೆ ನಿತ್ಯ ಅನೇಕ ಭಕ್ತರು ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ವಾರಾಂತ್ಯದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವತಾ ಸನ್ನಿಧಿಗೆ ಸೇವೆ ಸಲ್ಲಿಸಿ ಕೃತಾರ್ಥ ಭಾವ ಹೊಂದುತ್ತಾರೆ ಎಂದರು.
ಭಕ್ತರಾದ ಅಶೋಕ ಗಣಪತಿ ಬಬ್ರುವಾಡ ಪ್ರತಿಕ್ರಿಯಿಸಿ, ಹುಬ್ಬಳ್ಳಿ-ಧಾರವಾಡ ಜನತೆಗೆ ಇದೊಂದು ಶಕ್ತಿ ಕೇಂದ್ರವಾಗಿದೆ. ಭಕ್ತರು ಶಾಂತಿ-ನೆಮ್ಮದಿಯಿಂದ ದೇವರ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ. ಶೃಂಗೇರಿ ಪೀಠದ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಗಳು ನಿತ್ಯ ನಡೆಯುತ್ತವೆ. ದೇವಸ್ಥಾನ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಇನ್ನಷ್ಟು ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಿದ್ರೆ ಒಳ್ಳೆಯದು ಎಂದು ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ : ಗಂಗಾವತಿ: ವಿಜೃಂಭಣೆಯಿಂದ ನಡೆದ ಪಂಪಾ ವಿರೂಪಾಕ್ಷೇಶ್ವರ ರಥೋತ್ಸವ - VIRUPAKSHESHWARA TEMPLE