ಚಾಮರಾಜನಗರ: ಫೆಬ್ರವರಿ 17ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ. ಅದೇ ರೀತಿ, ಫೆಬ್ರವರಿ 16ರಂದು ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಮತ್ತು ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮವೂ ಮುಂದಕ್ಕೆ ಹೋಗಿದೆ.
ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಕಾರಣಾಂತರಗಳಿಂದ ದಿನಾಂಕ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಈಗಾಗಲೇ ಸಮಾವೇಶಕ್ಕಾಗಿ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಭಾಗಶಃ ಶಾಮಿಯಾನ ಹಾಕುವ ಕಾರ್ಯ ಮುಕ್ತಾಯಗೊಂಡಿದೆ. ಬೃಹತ್ ಮಟ್ಟದ ಸಮಾವೇಶ ನಡೆಸಲು ಉದ್ದೇಶಿಸಲಾಗಿದ್ದು, 20 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇತ್ತು.
![shamiana](https://etvbharatimages.akamaized.net/etvbharat/prod-images/11-02-2025/kn-cnr-cabinet-av-ka10038_11022025145051_1102f_1739265651_610.jpg)
ಮಲೆ ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆಗೆ ಸಿದ್ಧತೆ ನಡೆಯುತ್ತಿದ್ದು, ಜರ್ಮನ್ ಟೆಂಟ್ ಹಾಕಲಾಗಿದೆ. ತಾತ್ಕಾಲಿಕ ಹೆಲಿಪ್ಯಾಡ್, ರಸ್ತೆಗಳು, ಮೂಲಸೌಕರ್ಯವನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ.
ಈ ಮೂಲಕ ಕ್ಯಾಬಿನೆಟ್ ಸಭೆ ಮೂರು ಬಾರಿ ಮುಂದೂಡಿಕೆ ಆದಂತಾಗಿದೆ. ಜನವರಿ ಮೊದಲನೇ ವಾರದ ಬಳಿಕ ಫೆ.14, 15 ಅದಾದ ಬಳಿಕ ಫೆ.17, 18ರಂದು ನಿಗದಿಯಾಗಿತ್ತು. ನಂತರ, ಫೆ.16ರಂದು ಚಾಮರಾಜನಗರದಲ್ಲಿ ಸಮಾವೇಶ, 17ಕ್ಕೆ ಸಂಪುಟ ಸಭೆ ಎಂದು ನಿರ್ಧರಿಸಲಾಗಿತ್ತು. ಈಗ ಈ ದಿನಾಂಕವೂ ಮುಂದೂಡಿಕೆಯಾಗಿದೆ.
ಇದನ್ನೂ ಓದಿ: ಫೆಬ್ರವರಿ 13ಕ್ಕೆ ಮಾದಪ್ಪನ ಬೆಟ್ಟದಲ್ಲಿ ಸಂಪುಟ ಸಭೆ ; ಗರಿಗೆದರಿದ ಗಡಿಜಿಲ್ಲೆ ಅಭಿವೃದ್ಧಿಯ ನಿರೀಕ್ಷೆ