ಚಾಮರಾಜನಗರ : ಮೇವಿಲ್ಲದೆ ರೋದಿಸುತ್ತಿದ್ದ ಹಸುಗಳಿಗೆ ಮಧ್ಯರಾತ್ರಿ 1.30ಕ್ಕೆ ಪೊಲೀಸರು ಆಹಾರ ಒದಗಿಸಿರುವ ಮಾನವೀಯ ಘಟನೆ ಶನಿವಾರ ತಡರಾತ್ರಿ ಸಂತೇಮರಹಳ್ಳಿಯಲ್ಲಿ ನಡೆದಿದೆ.
ಸಂತೇಮರಹಳ್ಳಿಯ ಕುಟುಂಬವೊಂದರ ದಂಪತಿಗೆ ಕೊರೊನಾ ವೈರಸ್ ಅಂಟಿದ್ದರಿಂದ ಮನೆಯನ್ನು ಸೀಲ್ಡೌನ್ ಮಾಡಲಾಗಿತ್ತು. ಮನೆಯಲ್ಲಿ ವಯೋವೃದ್ಧರಷ್ಟೇ ಇರೋದರಿಂದ ಜೊತೆಗೆ ಕಂಟೇನ್ಮೆಂಟ್ ಝೋನ್ ಮಾಡಿದ್ದರಿಂದ ಮನೆಯಲ್ಲಿದ್ದ ಎರಡು ಹಸುಗಳು ಮೇವಿಲ್ಲದೆ ರೋದಿಸುತ್ತಿದ್ದವು. ಏನು ಮಾಡದ ಸ್ಥಿತಿಯಲ್ಲಿ ಅಜ್ಜ-ಅಜ್ಜಿ ಇದ್ದಿದ್ದನ್ನು ಸ್ಥಳೀಯರೊಬ್ಬರು ರಾತ್ರಿ 12ರ ಸುಮಾರಿಗೆ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರ ಗಮನಕ್ಕೆ ತಂದರು.
ಕೂಡಲೇ ಸ್ಪಂದಿಸಿದ ಎಸ್ಪಿ, ಸಂತೇಮರಹಳ್ಳಿ ಠಾಣೆಯ ಪೊಲೀಸ್ ಸಿಬ್ಬಂದಿ ಮೂಲಕ ರೋದಿಸುತ್ತಿದ್ದ ಹಸುಗಳಿಗೆ ಮೇವು ಒದಗಿಸಿದ್ದಾರೆ. ಅಷ್ಟೇ ಅಲ್ಲದೇ, ಇಂದು ಬೆಳಗ್ಗೆಯೂ ಕೂಡ ಮೇವನ್ನು ಒದಗಿಸಿದ್ದು ಕಂಟೇನ್ಮೆಂಟ್ ಝೋನ್ ಇರುವತನಕ ಮೂಕ ಪ್ರಾಣಿಗಳಿಗೆ ಆಹಾರ ಒದಗಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
![SP provides Fodder to cattle](https://etvbharatimages.akamaized.net/etvbharat/prod-images/kn-cnr-02-sp-av-7202614_19072020135617_1907f_1595147177_1051.jpg)
ಕೊರೊನಾ ಸಂಕಷ್ಟದಲ್ಲಿ ಸೇನಾನಿಗಳಂತೆ ದುಡಿಯುತ್ತಿರುವ ಪೊಲೀಸರು ಮಾಡಿದ ಈ ಕಾರ್ಯ ಅವರ ಮಾತೃ ಹೃದಯವಂತಿಕೆಗೆ ಸಾಕ್ಷಿ ಎಂಬಂತಿದೆ. ಮಧ್ಯರಾತ್ರಿ 1.30ಕ್ಕೆ ಗೋಪಾಲನೆ ಮಾಡಿರುವುದಕ್ಕೆ ಜನರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.