ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಅಚ್ಗಾಳ್ ಸರ್ಕಲ್ನಿಂದ ತಾಪಂ ವೃತ್ತದವರೆಗಿನ ಸುಮಾರು ಒಂದು ಕಿ.ಮೀ ಉದ್ದದ ರಸ್ತೆಗೆ "ಯುವರತ್ನ ಪುನೀತ್ ರಾಜ್ ಕುಮಾರ್ " ರಸ್ತೆ ಎಂದು ಮಂಗಳವಾರ ನಾಮಕರಣ ಮಾಡಿ ನಾಮಫಲಕವನ್ನು ಶಾಸಕ ಎನ್.ಮಹೇಶ್ ಅನಾವರಣಗೊಳಿಸಿದರು.
ಅಪ್ಪು ಹೆಸರನ್ನು ನಾಮಕರಣ ಮಾಡುವ ಮೂಲಕ ಅಗಲಿದ ನಟನಿಗೆ ತವರು ಜಿಲ್ಲೆಯಲ್ಲಿ ಗೌರವ ಸಲ್ಲಿಸಲಾಗಿದೆ. ಡಾ ರಾಜ್ ಕುಟುಂಬದವರು ನಮ್ಮ ದೇಶ ಹಾಗೂ ರಾಜ್ಯದ ಸಾಂಸ್ಕೃತಿಕ, ಸಾಮಾಜಿಕ ರಾಯಭಾರಿಗಳಾಗಿದ್ದಾರೆ. ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಕುಟುಂಬದ ಋಣ ತೀರಿಸಲು ಸಾಧ್ಯವಿಲ್ಲ ಎಂದು ಇದೇ ವೇಳೆ ಎನ್.ಮಹೇಶ್ ಗುಣಗಾನ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಮೂಡದ ಒಮ್ಮತ:
ನಟ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ನಗರದ ಡೀವಿಯೇಷನ್ ರಸ್ತೆಗೆ ನಾಮಕರಣ ಮಾಡುವ ಸಂಬಂಧ ಕರೆದಿದ್ದ ವಿಶೇಷ ಸಭೆಯಲ್ಲಿ ಸದಸ್ಯರಲ್ಲಿ ಒಮ್ಮತ ಮೂಡದ ಕಾರಣ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಯಿತು.
ಸಭೆಯ ಆರಂಭದಲ್ಲೇ ಎಸ್ಡಿಪಿಐ ಸದಸ್ಯ ಗಾಳೀಪುರ ಮಹೇಶ್ 2015ರ ಮೇ 7 ರಂದು ನಗರಸಭೆ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ಭುವನೇಶ್ವರಿ ವೃತ್ತದಿಂದ ಪ್ರವಾಸಿಮಂದಿರದವರಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ನಗರಸಭೆಯಲ್ಲಿ ನಿರ್ಣಯ ಮಾಡಿ, ಅನುಮೋದನೆ ನೀಡಲಾಗಿದೆ. ಹಾಗಾಗಿ ಆ ರಸ್ತೆಗೆ ಡಾ. ಅಂಬೇಡ್ಕರ್ಅವರ ಹೆಸರನ್ನು ಇಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆ ನಾಮನಿರ್ದೇಶನ ಸದಸ್ಯ ನಾಗೇಶ್ ನಾಯಕ ಮಾತನಾಡಿ, ಆ ಸಭೆಯಲ್ಲಿ ನಿರ್ಣಯ ಮಾಡಲಾಗಿದೆಯೋ ಹೊರತೂ ಅನುಮೋದನೆಯಾಗಿಲ್ಲ. ಆ ರಸ್ತೆಗೆ ವೀರಯೋಧ ಪ್ರಭುಸ್ವಾಮಿ ಹೆಸರಿಡಬೇಕು ಎಂದು ಆಗ್ರಹಿಸಿದರು.
ಆಗ ಸದಸ್ಯ ಗಾಳೀಪುರ ಮಹೇಶ್ ಪ್ರತಿಕ್ರಿಯಿಸಿ ಆ ಸಂದರ್ಭದಲ್ಲಿ ನಾನು ಸಹ ಇದ್ದು, ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವುದರ ಜತೆಗೆ ಅನುಮೋದನೆಯನ್ನು ನೀಡಲಾಗಿದೆ, ಅದನ್ನು ತಿಳಿಯದೇ ಮಾತನಾಡುತ್ತಿರುವುದು ಸರಿಯಲ್ಲ. ನೀವು ಅಂಬೇಡ್ಕರ್ ವಿರೋಧಿ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಕೆಲ ಸಮಯ ಗೊಂದಲದ ವಾತಾವರಣ ಉಂಟಾಯಿತು.ಇದೇವೇಳೆ ಸದಸ್ಯ ಶಿವರಾಜ್ ಮಾತನಾಡಿ, ನಗರದ ಭುವನೇಶ್ವರಿ ವೃತ್ತದಿಂದ ಪ್ರವಾಸಿಮಂದಿರದವರಗೆ ಅಂಬೇಡ್ಕರ್ ಹೆಸರಿಡುವ ಕುರಿತು ನಿರ್ಣಯ ತೆಗೆದುಕೊಂಡಿರುವುದು ತಮಗೆ ಗೊತ್ತಿಲ್ಲ. ಅಂದಿನ ಜಿಲ್ಲಾಧಿಕಾರಿ ಅಂಬೇಡ್ಕರ್ ಹೆಸರಿಡುವ ಕುರಿತು ಅನುಮೋದನೆ ನೀಡಿದ್ದಾರೆಯೇ ಎಂಬುದನ್ನು ಕೂಲಂಕಷವಾಗಿ ಚರ್ಚಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು, ವಿನಾಕಾರಣ ಗೊಂದಲಬೇಡ ಎಂದರು.
10 ನೇ ವಾರ್ಡ್ ಸದಸ್ಯ ಮನೋಜ್ ಪಟೇಲ್ ಮಾತನಾಡಿ, ಈಗಾಗಲೇ ನಗರದ ಜಿಲ್ಲಾ ಕ್ರೀಡಾಂಗಣ, ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ನಗರದ ಪ್ರಮುಖ ಉದ್ಯಾನವನಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿಡಲಾಗಿದೆ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರು ನಮ್ಮ ಜಿಲ್ಲೆಯವರಾಗಿದ್ದು, ಅವರ ಹೆಸರನ್ನು ನಗರದ ರಸ್ತೆಯೊಂದಕ್ಕೆ ನಾಮಕರಣ ಮಾಡಬೇಕು. ಆ ಮೂಲಕ ಗೌರವಸೂಚಿಸಬೇಕು ಎಂದು ಮನವಿ ಮಾಡಿದರು. ಎಸ್ಡಿಪಿಐ ಸದಸ್ಯ ಅಬ್ರಾರ್ ಅಹಮದ್ ಮಾತನಾಡಿ, ಪ್ರಮುಖ ರಸ್ತೆಗಳಿಗೆ ಹೆಸರಿಡಬೇಕು ಎನ್ನುವುದು ಗಂಭೀರವಾದ ವಿಷಯ, ಆದ್ದರಿಂದ ಮುಂದಿನ ಸಾಮಾನ್ಯ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಮುಂದಿನ ಕ್ರಮವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಉಪಾಧ್ಯಕ್ಷೆ ಪಿ.ಸುಧಾ, ಆಯುಕ್ತ ಕರಿಬಸವಯ್ಯ ಇದ್ದರು.