ಚಾಮರಾಜನಗರ: ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನಗರದಲ್ಲಿಂದು ಅಧಿಕಾರಿಗಳೊಂದಿಗೆ ಸಾಲು ಸಾಲು ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಲು ಮುಂದಾದರು.
ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಭೆ ನಡೆಸಿದ ಸಚಿವರು ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತ ಪ್ರದೇಶಾಭಿವೃದ್ದಿ ಬಗ್ಗೆ ಡಿಎಫ್ಒ ಏಡುಕುಂಡಲು ತಯಾರಿಸಿರುವ ಮಾಸ್ಟರ್ ಪ್ಲಾನ್ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಮೊದಲ ಹಂತದಲ್ಲಿ ಸ್ಕೈವಾಕ್ ಸಮೇತ ಆ್ಯಂಪಿ ಥಿಯೇಟರ್, ಆಕರ್ಷಕ ಸ್ವಾಗತ ಕಮಾನು, ಫುಡ್ ಕೋರ್ಟ್ ಹಾಗೂ ಇಂಟಲಿಜೆನ್ಸ್ ಕಣ್ಗಾವಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಅಧಿಕಾರಿ ಮನವರಿಕೆ ಮಾಡಿದ್ರು.ಈ ಸಂಬಂಧ ಕಾಮಗಾರಿಗೆ ಡಿಸೆಂಬರ್ನಲ್ಲಿ ಭೂಮಿ ಪೂಜೆ ನಡೆಸುವುದಾಗಿ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಬ್ಯಾಂಬೂ ಪಾರ್ಕ್, ಆರ್ಕಿಡ್ ಪಾರ್ಕ್, ಎನರ್ಜಿ ಪಾರ್ಕುಗಳೆಂಬ ವಿಶಿಷ್ಟ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಸೋಲಾರ್ ಎನರ್ಜಿ ಮೂಲಕ ವಿದ್ಯುತ್ ಶಕ್ತಿ ಉತ್ಪಾದಿಸಿ ಅದನ್ನು ಉದ್ಯಾನಕ್ಕೆ ಬಳಸಿಕೊಳ್ಳುವ ಉದ್ದೇಶವೂ ಇದೆ. ಇದರ ಅನುಷ್ಠಾನಕ್ಕೆ ಮುಂದಾಗುವುದಾಗಿ ಸುರೇಶ್ ಕುಮಾರ್ ತಿಳಿಸಿದರು.
ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಎಫ್ಒ ಏಡುಕುಂಡಲು ಮಾತನಾಡಿ, 21 ವಿಶಿಷ್ಟ ಪಾರ್ಕುಗಳ ಮಾಸ್ಟರ್ ಪ್ಲಾನ್ ಮಾಡಿದ್ದು ಅಂದಾಜು 100 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಈ ಯೋಜನೆಗೆ ಈಗಾಗಲೇ 4 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಹೊಂಡ ಮುಚ್ಚಿ :
ಜಿಲ್ಲೆಯಲ್ಲಿ ಅನುಮತಿ ಪಡೆದಿರುವ 101 ಗಣಿಗಾರಿಕಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈಗಾಗಲೇ ಗಣಿಗಾರಿಕೆ ನಡೆಸಿ ಹಾಗೆಯೇ ಬಿಟ್ಟಿರುವ ಆಳವಾದ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಇವುಗಳನ್ನು ಮುಚ್ಚಬೇಕು ಎಂದು ಶಾಸಕ ಎನ್.ಮಹೇಶ್ ಧ್ವನಿ ಎತ್ತಿದ್ದರು. ಇದಕ್ಕೆ ಶಾಸಕ ಪುಟ್ಟರಂಗ ಶೆಟ್ಟಿ ಮತ್ತು ನಿರಂಜನಕುಮಾರ್ ದನಿಗೂಡಿಸಿದ್ದು, ಅವರು ಪ್ರಪಾತ ಮಾಡಿ ಹೊರಟರೆ ಮುಚ್ಚಿಸುವವರು ಯಾರು? ಅವರೇ ಅದನ್ನು ಮುಚ್ಚಿಸಬೇಕು. ಹೊರಗಡೆ ತೆಗೆದಿರುವ ನಿರುಪಯುಕ್ತ ಕಲ್ಲು ಮಣ್ಣನ್ನೇ ಹಾಕಿದರೇ ಶೇ.50ರಷ್ಟು 150-200 ಅಡಿ ಆಳದ ಹೊಂಡಗಳು ಮುಚ್ಚಲಿದೆ ಎಂದು ಸಲಹೆ ನೀಡಿದರು.
ರೈತರ ಪ್ರತಿಭಟನೆ:
ನಿಗದಿತ ಸಮಯದಂತೆ ರೈತರೊಂದಿಗೆ ಸಭೆ ಪ್ರಾರಂಭವಾಗದಿದ್ದರಿಂದ ರೊಚ್ಚಿಗೆದ್ದ ರೈತರು ಜಿಲ್ಲಾಡಳಿತ ಸಭಾಂಗಣದಲ್ಲಿ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.