ಕೊಳ್ಳೇಗಾಲ(ಚಾಮರಾಜನಗರ): ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಿರುವ ಸಮಯದಲ್ಲಿ ಅಧಿವೇಶನಕ್ಕೆ ಗೈರಾಗಿ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿದ್ದ ಶಾಸಕ ಎನ್. ಮಹೇಶ್, ಇಲ್ಲಿಯವರೆಗೂ ಮಾಯಾವತಿ ಹೇಳಿದ ಹಾಗೆ ಕೇಳಿದ್ದೇನೆ ಎನ್ನುತ್ತಿದ್ದಾರೆ. ಆದರೆ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಆಧಾರದ ಮೇಲೆ ಬಿಜೆಪಿ ಸರ್ಕಾರದ ರಚನೆಯಲ್ಲಿ ಎನ್. ಮಹೇಶ್ ಪ್ರಮುಖ ಪಾತ್ರಧಾರಿ ಅನ್ನೋದು ಸ್ಪಷ್ಟವಾಗಿದೆ ಎಂದು ಬಿಎಸ್ಪಿ ಆರೋಪಿಸಿದೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ಬಿ.ಎಸ್.ಪಿ ಅಧ್ಯಕ್ಷ ರಾಜಶೇಖರ್ ಮೂರ್ತಿ, ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಗೆದ್ದು ಶಾಸಕರಾಗಿರುವ ಎನ್.ಮಹೇಶ್, ಈ ವಿಚಾರವಾಗಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.