ಚಾಮರಾಜನಗರ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಳನಳಿಸುತ್ತಿದ್ದ ಜೋಳ ಕಪ್ಪುಗಟ್ಟಿರುವುದರಿಂದ ವ್ಯಾಪಾರಿಗಳು ಕೊಳ್ಳಲು ಬರುತ್ತಿಲ್ಲ. ಈ ಹಿನ್ನೆಲೆ ಜಿಲ್ಲೆಯ ಹೊನ್ನೂರು, ಬೀಚನಹಳ್ಳಿ ಸುತ್ತಮುತಲಿನ ನೂರಾರು ರೈತರು ಕಂಗಲಾಗಿದ್ದಾರೆ.
ಕಟಾವಿಗೆ ಬಂದಿದ್ದ ಬಿಳಿಜೋಳ ಸತತ ಮಳೆಗೆ ನೆನೆದು ಕಪ್ಪಾಗಿರುವುದರಿಂದ, ಜೋಳ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಇತ್ತ ಕಟಾವು ಮಾಡಲಾಗದೇ ಬೆಳೆಯನ್ನು ಹಾಗೇ ಬಿಡಲು ಆಗದೇ ಉಭಯ ಸಂಕಟ ಅನುಭವಿಸುತ್ತಿದ್ದಾರೆ.
ಎರಡು ಮೂರು ಗ್ರಾಮಗಳಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಜೋಳ ಬೆಳೆದಿದ್ದು, ಮಳೆ ಇವರ ಆದಾಯಕ್ಕೆ ಕಂಟಕವಾಗಿದೆ. ಕೊರೊನಾ ನಡುವೆ ಉರಿ ಬಿಸಿಲಿನಲ್ಲಿ ಕಷ್ಟಪಟ್ಟು ಮಾಡಿದ್ದ ದುಡಿಮೆಗೆ ಪ್ರತಿಫಲ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಬಿಳಿ ಜೋಳಕ್ಕೆ ₹2,500- ₹ 2,800 ತನಕ ಬೆಲೆ ಇದೆ. ಅಂಗಡಿಗಳಲ್ಲಿ ₹ 3000ಕ್ಕೂ ಹೆಚ್ಚು ದರವಿದೆ. ಧಾರಣೆ ಏರಿರುವ ಸಮಯದಲ್ಲಿ ಜೋಳ ತಾಕಿನಲ್ಲಿ ಉದುರುತ್ತಿದೆ. ₹600 ಬೆಲೆಗೂ ಕೊಳ್ಳುವವರಿಲ್ಲ. ಹೈಬ್ರೀಡ್ ಮತ್ತು ಸ್ಥಳೀಯ ತಳಿಗಳನ್ನು ನಂಬಿ ಫಸಲು ತೆಗೆದವರಿಗೆ ಈ ವರ್ಷ ಹಿಂಗಾರು ಮತ್ತು ಮುಂಗಾರು ಹೊಡೆತ ಜೋಳ ನಂಬಿದವರ ಬದುಕನ್ನೇ ನಲುಗಿಸಿದೆ.
ಬಿಳಿ ಜೋಳ ಕೃಷಿಕರಿಗೆ ಸರ್ಕಾರ ನೆರವಾಗಬೇಕು. ಬೆಳೆಯ ಖರ್ಚನ್ನಾದರೂ ಸಹಾಯಧನದ ರೂಪದಲ್ಲಿ ಒದಗಿಸಬೇಕು. ಇದರಿಂದ ಸಾಲ ಮಾಡಿ, ಜೋಳ ಬೆಳೆದವರಿಗೆ ನೆರವಾಗುತ್ತದೆ ಇಲ್ಲವೇ ಬೆಳೆದ ಜೋಳವನ್ನು ಸರ್ಕಾರವೇ ಬೆಂಬಲ ಬೆಲೆ ಕೊಟ್ಟು ಖರೀದಿಸಲಿ ಎಂದು ರೈತರು ಒತ್ತಾಯಿಸಿದ್ದಾರೆ.