ಚಾಮರಾಜನಗರ: ಮೈಯಲ್ಲಿ ದೇವರು-ಭೂತ ಬಂದಿದೆ ನಂಬಿಕೆಯನ್ನು ದೊಡ್ಡವರಲ್ಲಿ ಕಾಣುತ್ತೇವೆ. ಆದರೆ, ಮಕ್ಕಳ ಮೈಯಲ್ಲೂ ಮಾರಿಯಮ್ಮ ದೇವಿ ಬಂದಿದ್ದಾಳೆ ಎನ್ನುವ ವಿಚಿತ್ರ ಘಟನೆ ಹನೂರು ತಾಲೂಕಿನ ಗೋಪಿನಾಥಂನಲ್ಲಿ ನಡೆದಿದೆ.
ಹೌದು, ನರಹಂತಕ ವೀರಪ್ಪನ್ ಊರಿನಲ್ಲಿ ಗಾಂಧಿ ತತ್ವ ಅನುಸರಿಸಿ ಬಲಿಯಾದ ಡಿಸಿಎಫ್ ಶ್ರೀನಿವಾಸನ್ ಅವರು ನಿರ್ಮಿಸಿರುವ ಮಾರಿಯಮ್ಮ ದೇವಾಲಯದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ 4-5 ಮಕ್ಕಳ ಮೈಯಲ್ಲೂ ಮಾರಿಯಮ್ಮ ಬಂದಿದ್ದಾಳೆ ಎನ್ನಲಾಗ್ತಿದೆ. ಅದೇ ರೀತಿ ಮಕ್ಕಳು ಕುಣಿದ ವಿಲಕ್ಷಣ ಘಟನೆ ಕಂಡುಬಂದಿದೆ. ಕಾವೇರಿ ನದಿಯಿಂದ 108 ಮಂದಿ ಮಹಿಳೆಯರು ಕುಂಭಹೊತ್ತು ಬರುವಾಗ ಹಿರಿಯ ಅರ್ಚಕ ಸೇರಿದಂತೆ 8-10 ಮಹಿಳೆಯರಿಗೆ ದೇವರು ಆವಾಹನೆಯಾದಂತೆ ನಾಲಿಗೆ ಹೊರಚಾಚಿ ನರ್ತಿಸಲಾರಂಭಿಸಿ ಕುಣಿದುಕೊಂಡೇ ದೇಗುಲದ ಬಳಿ ಬರುತ್ತಾರೆ. ಇವರೊಟ್ಟಿಗೆ 3-4 ಮಕ್ಕಳು ದೇವರು ಬಂದಂತೆ ಕುಣಿದು, ತಲೆ ಅಲ್ಲಾಡಿಸಿಕೊಂಡು ಕೂಗಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಹಬ್ಬದ ಕುರಿತು ಗ್ರಾಮಸ್ಥರೊಬ್ಬರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಪ್ರತೀ 13 ವರ್ಷಕ್ಕೊಮ್ಮೆ ದೇವಾಲಯಕ್ಕೆ ಸುಣ್ಣ-ಬಣ್ಣ ಹಚ್ಚಿ ಕುಂಭಾಭಿಷೇಕ ನಡೆಸಲಾಗುತ್ತದೆ. ಈ ವೇಳೆ ಮಕ್ಕಳ ಮೇಲೂ ದೇವರು ಬರಲಿದ್ದು, ಮಾರಿಯಮ್ಮ ದೇವಾಲಯದ ವಿಭೂತಿ ಹಚ್ಚಿದಾಗ ಶಾಂತರಾಗುತ್ತಾರೆ ಎಂದು ತಿಳಿಸಿದರು.
ಒಟ್ಟಿನಲ್ಲಿ ದೇವರು-ಭೂತ ತಮ್ಮ ಮೇಲೆ ಆವಾಹನೆಯಾದಂತೆ ದೊಡ್ಡವರು ನಡೆದುಕೊಳ್ಳುತ್ತಿದ್ದರು. ಈಗ ಮಕ್ಕಳು ಸೇರಿರುವುದು ವಿಪರ್ಯಾಸ.