ಚಾಮರಾಜನಗರ: ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ 34 ಮಂದಿ ಜಾನಪದ ಕಲೆಯಲ್ಲಿನ ಸಾಧಕರು, ತಜ್ಞರಿಗೆ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಬೇರೆ ಜಿಲ್ಲಾಕೇಂದ್ರ, ಪಟ್ಟಣಗಳಿಗೆ ವಿಶೇಷಣ ಇರುವಂತೆ ಚಾಮರಾಜನಗರಕ್ಕೆ ಜಾನಪದದ ತವರೂರು ಎಂದೇಕೆ ಸ್ವಾಗತ ಕಮಾನಿಲ್ಲ ಎಂದು ಅಕಾಡೆಮಿ ಅಧ್ಯಕ್ಷೆ ಜೋಗತಿ ಮಂಜಮ್ಮ ಕೇಳಿದ ಮಾತಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಇನ್ನೊಂದು ತಿಂಗಳೊಳಗೆ ಸ್ವಾಗತ ಕಮಾನು ನಿರ್ಮಿಸುವುದಾಗಿ ತಿಳಿಸಿದರು. ಜಾನಪದ ಕಲೆಗಳ ನಾಡು ಚಾಮರಾಜನಗರಕ್ಕೆ ಸ್ವಾಗತ ಎಂಬ ಕಮಾನನ್ನು ನಿರ್ಮಿಸಲಾಗುವುದು, ಜಾನಪದ ಕಲೆಗೆ ಚಾಮರಾಜನಗರಕ್ಕಿಂತ ಉತ್ತಮ ಜಿಲ್ಲೆ ಇನ್ನೊಂದಿಲ್ಲ ಎಂದರು.
ಜೋಗತಿ ಮಂಜಮ್ಮ ಅವರದು ಸಾಹಸಮಯ ಬದುಕು. ಯಾವುದೇ ಶಿಫಾರಸು ಇಲ್ಲದೇ ಮೋದಿ ಸರ್ಕಾರದಲ್ಲಿ ಪ್ರಶಸ್ತಿ ಸಿಗುತ್ತಿದೆ. ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳಿಗೆ ಮೆರುಗು ಬರುವ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಢಮರುಗ ಬಾರಿಸುವ ಮೂಲಕ ಚಾಲನೆ ಕೊಟ್ಟರು.
ಓದಿ: ಹಿಮನದಿ ದುರಂತದಿಂದ ನಲುಗಿದ ಉತ್ತರಾಖಂಡ: 8 ಮಂದಿಯ ಮೃತದೇಹ ಪತ್ತೆ
ಇನ್ನು ಸಚಿವರು ನೀಡಿದ ಮನೆ ಹಾಗೂ ಭವನದ ಭರವಸೆಗೆ ಜೋಗತಿ ಮಂಜಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಶುಕ್ರವಾರವಷ್ಟೇ ಈಟಿವಿ ಭಾರತದೊಂದಿಗೆ ಜೋಗತಿ ಮಂಜಮ್ಮ ಮನದಾಳ ಹಂಚಿಕೊಂಡು ಮನೆ ಕಟ್ಟಲು, ರಂಗಮಂದಿರ ಕಟ್ಟಲು ಸರ್ಕಾರ ನೆರವು ನೀಡಬೇಕೆಂದು ಒತ್ತಾಯಿಸಿದ್ದರು.