ಬೆಂಗಳೂರು: ನಗರದಲ್ಲಿ ಜನ ಬಿಜೆಪಿಗೆ ವೋಟು ಹಾಕಿ ಗೆಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಆಡಳಿತ ಪಕ್ಷ ಹಾಗೂ ಬಿಬಿಎಂಪಿ ಮುಂದಾಗಿದೆ ಎಂದು ಬಿಬಿಎಂಪಿಯ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಬಗ್ಗೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಪ್ರಸ್ತಾವನೆಯನ್ನು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಗೆ ಮುಂದಿಟ್ಟಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಆಸ್ತಿ ತೆರಿಗೆ ಹೆಚ್ಚಳ ಮಾಡಬಾರದು ಎಂದು ಆಗ್ರಹಿಸಿದರು.
ಕೆಎಂಸಿ ನಿಯಮದ ಪ್ರಕಾರ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಅವಕಾಶವಿದೆ. ಆದರೆ ಚುನಾವಣೆ ಪೂರ್ವದಲ್ಲಿ ತೆರಿಗೆ ಹೆಚ್ಚಳ ಮಾಡದೇ ಚುನಾವಣೆ ಮುಗಿದು ಹೀನಾಯ ಸೋಲು ಕಂಡ ಬಳಿಕ ಬಿಬಿಎಂಪಿ ಜನರ ಮೇಲೆ ಹೊರೆ ಹಾಕಲು ಮುಂದಾಗಿದೆ ಎಂದರು. ನಗರದಲ್ಲಿ ಈಗಾಗಲೇ ಜನಜೀವನ ದುಬಾರಿಯಾಗುತ್ತಿದೆ, ವಿದ್ಯುತ್ ಬಿಲ್, ನೀರಿನ ಬಿಲ್ ಕೂಡಾ ಹೆಚ್ಚಳವಾಗಿದೆ. ಆಸ್ತಿತೆರಿಗೆ ಹೆಚ್ಚಳ ಮಾಡಿದ್ರೆ 2015 ರ ಮಾದರಿಯಲ್ಲೇ ಬಿಜೆಪಿ ಬೃಹತ್ ಪ್ರತಿಭಟನೆ ಮಾಡಲಿದೆ ಎಂದು ರೆಡ್ಡಿ ಎಚ್ಚರಿಕೆ ರವಾನಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಗಂಗಾಂಬಿಕೆ ಅವರು, ಈವರೆಗೆ ಅಧಿಕಾರಿಗಳ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿರಬಹುದು. ಕೌನ್ಸಿಲ್ನಲ್ಲಿ ಚರ್ಚೆಗೆ ಬಂದಾಗ ಗೊತ್ತಾಗಲಿದೆ. ಆದ್ರೆ ಈಗಾಗಲೇ ಹಣಕಾಸು ವರ್ಷ ಅರ್ಧ ಮುಗಿದಿದ್ದು, ಈಗ ಹೆಚ್ಚಳ ಮಾಡುವ ಬಗ್ಗೆ ಗೊಂದಲಗಳು ಉಂಟಾಗಬಹುದು ಎಂದಿದ್ದಾರೆ.