ಬಳ್ಳಾರಿ: ಪಾಕಿಸ್ತಾನ ಸೇರಿದಂತೆ ಇತರೆ ದೇಶದ ಮರುಭೂಮಿಯಲ್ಲಿ ಕಾಣ ಸಿಗುವ ವಿಷಕಾರಕ ಸಿಂಡ್ ಕ್ರೈಟ್ ಸ್ನೇಕ್ವೊಂದು ನಗರದಲ್ಲಿ ಪತ್ತೆಯಾಗಿದೆ. ಈ ಸಿಂಡ್ ಕ್ರೈಟ್ ಸ್ನೇಕ್ ಹಿಡಿಯುವಲ್ಲಿ ವಿಮ್ಸ್ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಡಾ.ಅಶೋಕ ಅವರು ಯಶಸ್ವಿಯಾಗಿದ್ದಾರೆ.
ಬಹಳಷ್ಟು ವಿಷಕಾರಕ ಹಾವು ಇದಾಗಿದ್ದು, ರಾತ್ರಿ ವೇಳೆಯಲ್ಲಿ ಬಲು ಜೋರಾಗಿಯೇ ಓಡಾಡುತ್ತೆ. ಮನುಷ್ಯನ ತಲೆಬುರುಡೆ ಹಾಗೂ ಇನ್ನಿತರೆ ಅಂಗಾಂಗಗಳ ಮೇಲೆ ದಾಳಿ ನಡೆಸುತ್ತದೆ. ಇಂತಹ ಅಪರೂಪದ ಸಿಂಡ್ ಕ್ರೈಟ್ ಸ್ನೇಕ್ ಗಣಿನಗರಿ ಬಳ್ಳಾರಿಯ ವಿಮ್ಸ್ ಕ್ರೀಡಾಂಗಣದಲ್ಲಿ ನಿನ್ನೆ ತಡರಾತ್ರಿ ದೊರಕಿದೆ. ಇಂತಹ ಹಾವನ್ನ ಹಿಡಿದಿರುವುದು ನನಗೆ ಬಹಳ ಖುಷಿ ತಂದಿದೆ ಎಂದು ಡಾ.ಅಶೋಕ ಹೇಳಿದ್ದಾರೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಡಾ.ಅಶೋಕ, ಇಂತಹ ವಿಷಕಾರಕ ಹಾವನ್ನ ಹಿಡಿಯುವದು ನನಗೆ ದೊಡ್ಡ ಸವಾಲಾಗಿತ್ತು. ನಾಗರಹಾವಿಗಿಂತಲೂ ಈ ಹಾವು ಹೆಚ್ಚು ವಿಷಕಾರಿಯಾಗಿದೆ. ಮೊದಲ ಬಾರಿಗೆ ವಿದೇಶಿ ತಳಿಯ ಹಾವನ್ನ ಹಿಡಿಯುವ ಸಾಹಸಕ್ಕೆ ಕೈಹಾಕಿದ್ದೆ. ಇದು ನನಗೆ ಒಂದು ರೀತಿಯ ಖುಷಿ ತಂದಿದೆ. ಅಷ್ಟೇ ಭಯವೂ ಕೂಡ ಆಗಿತ್ತು. ಯಾಕಂದರೆ ಈ ಹಾವು ಕಚ್ಚಿದರೆ ಮನುಷ್ಯರಿಗೆ ಬೇಗನೆ ವಿಷ ಏರುತ್ತದೆ ಎಂದು ತಿಳಿಸಿದ್ದಾರೆ.