ಬಳ್ಳಾರಿ: ಕೃಷಿ ಚಟುವಟಿಕೆ ಮುಗಿಸಿ ದಣಿದ ಎತ್ತುಗಳನ್ನು ನೀರುಣಿಸಲು ತೆರಳಿದ್ದ ವೇಳೆ ಎತ್ತಿನಗಾಡಿ ಗೋಕಟ್ಟೆಯಲ್ಲಿ ಮುಳುಗಿ ಎತ್ತು ಮೃತಪಟ್ಟಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಸುಗ್ಗಿಯ ಕಾಲವಾಗಿದ್ದರಿಂದ ರೈತ ಹುಚ್ಚೆಂಗೆಪ್ಪ ಹೊಲದಲ್ಲಿನ ಪೈರನ್ನು ಎತ್ತಿನಗಾಡಿಯಲ್ಲಿ ಕಣಕ್ಕೆ ಸಾಗಿಸಿದ್ದಾರೆ. ಬಿಸಿಲು ಧಗೆಯಿಂದ ಬಸವಳಿದ ಎತ್ತುಗಳಿಗೆ ನೀರುಣಿಸಲು ಎತ್ತಿನಗಾಡಿಯನ್ನು ಗೋಕಟ್ಟೆಗೆ ಇಳಿಸಿದ್ದಾರೆ. ದಣಿದ ಎತ್ತುಗಳು ರಭಸವಾಗಿ ನೀರು ಕುಡಿಯಲು ಗೋಕಟ್ಟೆಗೆ ನುಗ್ಗಿದ್ದರಿಂದ ನಿಯಂತ್ರಣ ಸಿಗದೆ ಎತ್ತುಗಳು ಸಹಿತ ನೀರಲ್ಲಿ ನುಗ್ಗಿದೆ. ಒಂದು ಎತ್ತು ನೀರಿನಿಂದ ಹೂರಗಡೆ ಬಂದಿದ್ದು, ಮತ್ತೊಂದು ಎತ್ತು ಗಾಡಿಯೊಳಗೆ ಸಿಲುಕಿ ಮೃತಪಟ್ಟಿದೆ. ಗಾಡಿಯಲ್ಲಿದ್ದ ರೈತ ಹುಚ್ಚೆಂಗೆಪ್ಪ ಹಾಗೂ ಅವರ ಮಗ ಈಜಿಕೊಂಡು ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕ್ಷಣಾರ್ಧದಲ್ಲೇ ಎತ್ತು ಸಾವನ್ನಪ್ಪಿರುವುದನ್ನು ಕಣ್ಣಾರೆ ಕಂಡ ರೈತ ಹುಚ್ಚೆಂಗೆಪ್ಪ ಭಾವುಕರಾಗಿ ಮೃತಪಟ್ಟ ಎತ್ತಿನ ದೇಹವನ್ನು ಮುಟ್ಟಿ ಗಳಗಳನೆ ಅತ್ತಿರುವ ವಿಡಿಯೋ ವೈರಲ್ ಆಗಿದ್ದು, ಎಂಥವರನ್ನೂ ಮನ ಕಲಕುವಂತೆ ಮಾಡಿದೆ.