ಬಳ್ಳಾರಿ: ಇಲ್ಲಿನ ಗಾಂಧಿನಗರದಲ್ಲಿರುವ ರಾಘವೇಂದ್ರ ಎಂಟರ್ ಪ್ರೈಸಸ್ ಕಚೇರಿಗೆ ಇಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಭೇಟಿ ನೀಡಿ, ಮಾಜಿ ಶಾಸಕ ಎನ್.ಸೂರ್ಯನಾರಾಯಣ ರೆಡ್ಡಿಯವರ ಕುಶಲೋಪರಿ ವಿಚಾರಿಸಿದರು.
ಶಾಸಕ ಗಣೇಶ್ ಅವರು ರೆಡ್ಡಿ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಅಪಾರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೂವಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದರು. ಈಗಲ್ಟನ್ ರೇಸಾರ್ಟ್ನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಸುಮಾರು ಮೂರು ತಿಂಗಳ ಕಾಲ ಜೈಲು ಸೇರಿದ್ದರು. ಇನ್ನು ಏಪ್ರಿಲ್ 25ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಗಣೇಶ್ ಅವರು ಎನ್.ಸೂರ್ಯನಾರಾಯಣ ರೆಡ್ಡಿಯವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಣೇಶ್, ಕಂಪ್ಲಿ ಕ್ಷೇತ್ರದಲ್ಲಿ ಕುಡಿವ ನೀರು, ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳಿದ್ದು, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮಾಜಿ ಶಾಸಕ ಎನ್.ಸೂರ್ಯನಾರಾಯಣ ರೆಡ್ಡಿ ಶಾಸಕರಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಸಲಹೆ ಪಡೆದು ಅಭಿವೃದ್ಧಿ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಪ್ರಬಲವಾಗಿ ಪಕ್ಷ ಸಂಘಟನೆಯಾಗಬೇಕಾದರೆ ರೆಡ್ಡಿಯವರಿಗೆ ಎಂಎಲ್ಸಿ ಸ್ಥಾನ ನೀಡಬೇಕು. ಈ ಬಗ್ಗೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು. ಅವರಿಗೆ ಒಳ್ಳೆಯ ಸ್ಥಾನ ನೀಡುವವರೆಗೆ ನಿರಂತರ ಹೋರಾಟ ನಡೆಸಲಾಗುವುದು. ಸಾಯೋವರೆಗೆ ಅವರ ಋಣ ತೀರಿಸಲು ಸಾಧ್ಯವಿಲ್ಲ. ತಂದೆ ಸಮಾನರಾದ ಅವರನ್ನು ಬಿಡಲ್ಲ ಎಂದರು.
ಇನ್ನು ಶಾಸಕ ರಮೇಶ್ ಜಾರಕಿಹೊಳಿ, ಸಚಿವ ತುಕಾರಾಂ ಜಾತಿ ಪ್ರೀತಿಗೆ ಬಂದಿರಬಹುದು. ಅದಕ್ಕೆ ಬಣ್ಣ ಹಚ್ಚುವ ಅವಶ್ಯಕತೆ ಇಲ್ಲ. ರೆಸಾರ್ಟ್ ಪ್ರಕರಣ ಸಣ್ಣ ಪ್ರಕರಣವಾಗಿದ್ದು, ಇದನ್ನು ದೊಡ್ಡದು ಮಾಡುವ ಅವಶ್ಯಕತೆ ಇದ್ದಿಲ್ಲ. ಶಾಸಕ ಆನಂದ್ ಸಿಂಗ್ ಹಾಗೂ ನಾವು ಒಂದೇ ತಾಲೂಕಿನವರಾಗಿದ್ದೇವೆ. ಆದರೂ ಈ ಸಣ್ಣ ಘಟನೆ ಈ ರೀತಿ ಬೆಳೆಯೋಕೆ ಕಾರಣ ಏನೆಂಬುದು ನನಗೆ ಗೊತ್ತಿಲ್ಲ. ಇದರಲ್ಲಿ ಕಾಣಲಾರದ ಶಕ್ತಿ ಕೆಲಸ ಮಾಡಿದ್ದು, ಕಾಲವೇ ಉತ್ತರ ನೀಡಲಿದೆ. ಶಾಸಕ ಭೀಮಾನಾಯ್ಕ ಬಗ್ಗೆ ನಾನು ಮಾತಾಡಲ್ಲ ಎಂದು ಹೇಳಿದರು.
ಮಾಜಿ ಶಾಸಕ ಎನ್.ಸೂರ್ಯನಾರಾಯಣ ರೆಡ್ಡಿ ಮಾತನಾಡಿ, ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವಿನ ಗಲಾಟೆ ಪ್ರಕರಣ ಸಂಧಾನ ಮಾಡಲು ಪ್ರಯತ್ನಿಸಲಾಗುವುದು. ಗಣೇಶ್ ಅವರ ತಪ್ಪು ಇದ್ದರೆ ಆನಂದ್ ಸಿಂಗ್ ಕ್ಷಮಿಸಿ ಒಗ್ಗಟ್ಟಾಗಿ ಕಾರ್ಯನಿರ್ವಸಬೇಕು. ಶಾಸಕ ಗಣೇಶ್ ಅಮಾನತು ಹಿಂಪಡೆಯಬೇಕು ಎಂದು ಕ್ಷೇತ್ರದ ಜನತೆಯೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಗ್ರಪ್ಪರನ್ನು ಭೇಟಿ ಮಾಡಿ ಅಮಾನತು ವಾಪಸ್ ಪಡೆಯುವಂತೆ ಒತ್ತಾಯಿಸಲಾಗುವುದು. ನಮ್ಮ ಮನೆಯಲ್ಲಿ ಅಣ್ಣ-ತಮ್ಮರ ಜಗಳ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ ಎಂದರು.