ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆ ಶುರುವಾದ ದಿನದಿಂದಲೂ ಅಂತರ ಕಾಯ್ದುಕೊಂಡಿದ್ದ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಇವತ್ತು ದಿಢೀರ್ ಅಂತಾ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಪ್ರತ್ಯೇಕ ವಿಜಯನಗರ ರಚನೆ ವಿಚಾರವಾಗಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಗಾಲಿ ಸೋಮಶೇಖರರೆಡ್ಡಿ, ಅನರ್ಹ ಶಾಸಕ ಆನಂದಸಿಂಗ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ರು. ಪ್ರತ್ಯೇಕ ಜಿಲ್ಲೆಯ ರಚನೆಯ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿಎಸ್ವೈ ಕರೆದಿದ್ದ ಸಭೆಯಲ್ಲಿ ಅನರ್ಹ ಶಾಸಕನಿಗೆ ಇಷ್ಟೊಂದು ಮಣೆ ಹಾಕೋದು ಬೇಡ ಎಂದಿದ್ದರು ಶಾಸಕ ರೆಡ್ಡಿ. ಈಗ ದಿಢೀರ್ ವಿಜಯನಗರ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ನವೆಂಬರ್ 25 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೆಳಗ್ಗೆ 10 ಗಂಟೆಗೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಆನಂದಸಿಂಗ್ ಪರವಾಗಿ ಪ್ರಚಾರ ಹಾಗೂ ಸಾರ್ವಜನಿಕ ಸಭೆ ನಿಗದಿಯಾಗುತ್ತಿದ್ದಂತೆಯೇ ಸಿಎಂಗೆ ಇರಿಸು, ಮುರಿಸು ಆಗದಂತೆ ನೋಡಿಕೊಳ್ಳಲು ಶಾಸಕ ಸೋಮಶೇಖರ ರೆಡ್ಡಿ ಈ ಪ್ರಚಾರದ ಕಣದಲ್ಲಿ ಧುಮುಕಿದ್ದಾರೆ ಎಂದು ಹೇಳಲಾಗ್ತಿದೆ.
ಜಿಲ್ಲೆಯ ಹೊಸಪೇಟೆ ನಗರದ ಪ್ರತಿಯೊಂದು ಮನೆಮನೆಗೂ ತೆರಳಿ ಅನರ್ಹ ಶಾಸಕ ಆನಂದಸಿಂಗ್ ಪರವಾಗಿ ಮತಯಾಚನೆ ಮಾಡಲು ಮುಂದಾಗೋ ಮುಖೇನ ಗಮನ ಸೆಳೆದಿದ್ದಾರೆ.