ಬಳ್ಳಾರಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದಲ್ಲಿರುವ ಪುರಸಭೆ ಕಚೇರಿಯಲ್ಲಿ ವಿದ್ಯುತ್ ವಾಹಕಗಳ ಸ್ಪರ್ಶದಿಂದಾಗಿ ಪ್ರಮುಖ ದಾಖಲೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಭಾನುವಾರ ತಡರಾತ್ರಿ ಸುರಿದ ಗುಡುಗು ಸಹಿತ ಮಳೆ ಅಬ್ಬರಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ನಂತರ ಬಂದ ವಿದ್ಯುತ್ ಸಂಪರ್ಕದಿಂದಾಗಿ ವಿದ್ಯುತ್ತಿನ ಎರಡೂ ವಾಹಕಗಳ ಸ್ಪರ್ಶದಿಂದ ಪುರಸಭೆ ಕಚೇರಿಯ ಮಹಡಿಯಲ್ಲಿರುವ ಮೀಟಿಂಗ್ ಹಾಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕರ್ತವ್ಯನಿರತ ಕಾವಲುಗಾರ ಕಚೇರಿಯ ಇಂಜಿನಿಯರ್ ಮಂಜುನಾಥ್ ಅವರಿಗೆ ಫೋನ್ ಮಾಡಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಮಂಜುನಾಥ್ ನೇತೃತ್ವದ ಸಿಬ್ಬಂದಿ ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಆದರೂ ಕೆಲ ಕಾಗದ ಪತ್ರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಪಿಎಸ್ಐ ವೈಶಾಲಿ ಝಳಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.