ಬಳ್ಳಾರಿ: ಜನರ ಸಮಸ್ಯೆಗಳ ಕುರಿತು ಚರ್ಚಿಸಿ ಸ್ಪಂದಿಸಬೇಕಾದ ತಾಲೂಕು ಪಂಚಾಯತ್ ಅಧಿಕಾರಿಗಳ ಸಮಯ ಪಾಲನೆಯ ಕೊರತೆಯಿಂದಾಗಿ ಬೆಳಗ್ಗೆ 11ಕ್ಕೆ ಪ್ರಾರಂಭವಾಗಬೇಕಿದ್ದ ಕೆಡಿಪಿ ಸಭೆ 12 ಆದ್ರೂ ಪ್ರಾರಂಭವಾಗಿರಲಿಲ್ಲ. ಸಮಯ ಪಾಲನೆಯಲ್ಲಿ ಅಧಿಕಾರಿಗಳು ಮತ್ತು ಸದಸ್ಯರ ನಿರ್ಲಕ್ಷ್ಯತನ ಎದ್ದು ಕಾಣುತ್ತಿತ್ತು.
ಅಲ್ಲದೆ 31 ಇಲಾಖೆಯ ಅಧಿಕಾರಿಗಳು ಮತ್ತು 39 ತಾಲೂಕು ಪಂಚಾಯತ್ ಸದಸ್ಯರು ಸಭೆಯಲ್ಲಿ ಹಾಜರಿರಬೇಕಾಗಿತ್ತು. ಆದರೆ ಬರೀ 30 ಅಧಿಕಾರಿಗಳು ಮತ್ತು ತಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಇಒ ಹಾಜರಿದ್ದರು. ಸದಸ್ಯರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ತಾಲೂಕಿನಲ್ಲಿ ಎಸ್.ಟಿ ಹಾಸ್ಟೆಲ್ಗಳ ಹೆಚ್ಚಳ
ಬಳ್ಳಾರಿ ತಾಲೂಕಿನಲ್ಲಿ 1800 ಎಸ್.ಟಿ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಪಡೆದುಕೊಂಡಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಆದ್ರೆ ಪ್ರತ್ಯೇಕವಾಗಿ ಒಂದು ಹಾಸ್ಟೆಲ್ ಗೆ 250 ವಿದ್ಯಾರ್ಥಿಗಳ ಇರುವಂತೆ ಮಾಡಿದರೇ ಅನುಕೂಲ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಇಒ ಅವರಿಗೆ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ
ಬಳ್ಳಾರಿ ತಾಲೂಕಿನ ಶಂಕರಬಂಡೆ ಮತ್ತು ಬಸರಕೋಡ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಪ್ರತಿನಿತ್ಯ ನನ್ನ (ಇಒ) ಮೊಬೈಲ್ ಗೆ ಕರೆಗಳು ಬರ್ತಿವೆ ಎಂದರು. ಅದಕ್ಕೆ ಅಧಿಕಾರಿಗಳು ಅದನ್ನು ಸರಿಪಡಿಸುತ್ತೇವೆ ಎನ್ನುವ ಉತ್ತರ ನೀಡಿದ್ರು.
ಬೆಳೆಹಾನಿ ಪರಿಹಾರ ಇಲ್ಲ
ಈ ಅತಿವೃಷ್ಟಿಯಿಂದ ಬೆಳೆಹಾನಿಯಾದ ರೈತರ ಭೂಮಿಗಳ ಸರ್ವೇ ಕೆಲಸ ಇನ್ನೂ ಮುಗಿದಿಲ್ಲ. ಇದರಿಂದ ರೈತರಿಗೆ ಪರಿಹಾರ ಸಿಕ್ಕಿಲ್ಲವೆಂದು ಇಒ ಕೇಳಿದರು. ಕೆಲ ಪ್ರದೇಶದ ರೈತರ ಭೂಮಿಗಳನ್ನು ಸರ್ವೇ ಮಾಡಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಕಳಿಸಿದ್ದೇವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಶಾಲೆಗಳಲ್ಲಿ ಕಟ್ಟಡಗಳ ಸಮಸ್ಯೆ
ತಾಲೂಕಿನ ಹಳೆ ಯರಿಗುಡಿ ಗ್ರಾಮದ ಶಾಲೆಯ ಹಳೆಯ ಕಟ್ಟಡಗಳನ್ನು ಕೆಡವಲು ಸಿ.ಆರ್.ಡಿ ಪತ್ರ ಬರೆಯಲು ಇಒ, ಡಿಡಿಪಿಐಗೆ ಸೂಚಿಸಿದರು. ಮಕ್ಕಳು ಆಟವಾಡಲು ಹೋದಾಗ ಏನಾದರೂ ಅನಾಹುತ ಆದರೆ ಅದಕ್ಕೆ ನೀವೇ ಹೊಣೆ ಎಂದು ಇಒ ಎಚ್ಚರಿಕೆ ನೀಡಿದರು.
ಆರ್.ಟಿ.ಇ ಮಕ್ಕಳ ಪ್ರತ್ಯೇಕತೆ
ಬಳ್ಳಾರಿ ಪೂರ್ವ ವಲಯದ ಶಾಲೆಗಳಲ್ಲಿ ಆರ್.ಟಿ.ಇ ಅಡಿಯಲ್ಲಿ ಆಯ್ಕೆಯಾದ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ ಎಂದು ಸಭೆಗೆ ಇಒ ತಿಳಿಸಿದರು. ಇದಕ್ಕೆ ಡಿಡಿಪಿಐ ಎಚ್ಚರವಹಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ಇಒ ಬಸಪ್ಪ, ಅಧ್ಯಕ್ಷೆ ರಮಿಜಾ.ಬಿ, ಉಪಾಧ್ಯಕ್ಷೆ ಪುಷ್ಪವತಿ ಮತ್ತು ಅಧಿಕಾರಿಗಳು ಮತ್ತು ಪಿಡಿಒಗಳು ಹಾಜರಿದ್ದರು.