ವಿಜಯನಗರ: ಅರಣ್ಯ ಪ್ರದೇಶದಿಂದ ಕರಡಿಯೊಂದು ದಾರಿ ತಪ್ಪಿ ಹೊಸಪೇಟೆ ನಗರ ಪ್ರದೇಶಕ್ಕೆ ಬಂದಿದ್ದು, ಜನರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಕರಡಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
ನಗರದ ರಾಣಿಪೇಟೆಯ ಮನೆಯೊಂದರ ಕಿಟಕಿಯ ಸಜ್ಜದ ಮೇಲೆ ಕುಳಿತಿರುವ ಕರಡಿ ಹೊರಗೆ ಬರುತ್ತಿಲ್ಲ. ಕರಡಿ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ. ನೀರು ಹಿಡಿಯುವ ಮಹಿಳೆಯರು ಮೊದಲು ನೋಡಿ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸರು ಕರಡಿ ಹಿಡಿಯಲು ಬಲೆ ಹಾಕಿದ್ದಾರೆ.
ರಸ್ತೆ ದಾಟುತ್ತಿದ್ದ ಕರಡಿಗೆ ವಾಹನ ಡಿಕ್ಕಿಹೊಡೆದು ಸಾವು: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಕರಡಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಸಮೀಪದ ಗೊಲ್ಲರಹಳ್ಳಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಭಾನುವಾರ ನಡೆದಿದೆ. ಅಂದಾಜು 14 ವರ್ಷದ ಗಂಡು ಕರಡಿ ಆಹಾರ ಅರಸಿಕೊಂಡು ಹೆದ್ದಾರಿ ಪಕ್ಕದ ಗದ್ದೆಗೆ ಬಂದಿದೆ. ಪುನಃ ಕಾಡಿಗೆ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಕರಡಿ ಸ್ಥಳದಲ್ಲೇ ಮೃತಪಟ್ಟಿದೆ.
ಘಟನಾ ಸ್ಥಳಕ್ಕೆ ತಕ್ಷಣವೇ ಮರಿಯಮ್ಮನಹಳ್ಳಿ ಪಿಎಸ್ಐ ಹನುಮಂತಪ್ಪ ತಳವಾರ್ ಮತ್ತು ಸಿಬ್ಬಂದಿ ಮತ್ತು ಅರಣ್ಯ ಇಲಾಖೆಯ ಎಸಿಎಫ್ ಭಾಸ್ಕರ್, ಆರ್ಎಫ್ ವಿನಯ್ ಪಶುವೈದ್ಯಾಧಿಕಾರಿ ಪ್ರಶಾಂತ್, ಮರಿಯಮ್ಮನಹಳ್ಳಿಯ ಶಾಖೆಯ ಉಪ ಅರಣ್ಯಾಧಿಕಾರಿ ಬಿ.ಅನಿಲ್ ಕುಮಾರ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ತುಮಕೂರು : ಜನರನ್ನು ನೋಡಿ ದಿಕ್ಕಾಪಾಲಾಗಿ ಓಡಿದ ಕರಡಿಗಳು