ಬಳ್ಳಾರಿ: ಜಿಲ್ಲೆಯ ಕಂಪ್ಲಿ ಸಮೀಪದ ಮೆಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಾರಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಮದ್ಯಪಾನ ನಿಷೇಧಿಸಿ ಮದ್ಯಪಾನಮುಕ್ತ ಗ್ರಾಮವೆಂದು ನಾಮಫಲಕ ಹಾಕಲಾಗಿದೆ. ಎಸ್ಪಿ ಸೈದುಲ್ ಅಡಾವತ್, ಎಎಸ್ಪಿ ನಟರಾಜ್, ಡಿವೈಎಸ್ಪಿ ಎಸ್.ಎಸ್.ಕಾಶಿ, ಪಿಐ ಸುರೇಶ ತಳವಾರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಉಪ್ಪಾರ ಹಳ್ಳಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಿದೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಮಾತನಾಡಿ, ಪ್ರತಿನಿತ್ಯ ಕುಡಿತದಿಂದಲೇ ಜೀವನ ಕಳೆಯುತ್ತಿದ್ದ ಗ್ರಾಮದ ಕೆಲವು ಕುಟುಂಬಗಳು ಇದೀಗ ಮದ್ಯ ವ್ಯಸನದಿಂದ ಮುಕ್ತರಾಗಿದ್ದಾರೆ. ಅಲ್ಲದೇ ಅವರೇ ಒಗ್ಗಟ್ಟಿನಿಂದ ಮುಂದೆ ಬಂದು ಮದ್ಯಮುಕ್ತ ಗ್ರಾಮ ಮಾಡಲು ನಿರ್ಧರಿಸಿದ್ದಾರೆ ಎಂದರು. ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದರೆ ಅಥವಾ ಕುಡಿದರೆ ಅವರನ್ನು ಗ್ರಾಮದಿಂದಲೇ ಹೊರಹಾಕಲಾಗುವುದು ಎಂದು ತಿಳಿಸಿದರು.
ಪಿಐ ಸುರೇಶ ತಳವಾರ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಉಪ್ಪಾರಳ್ಳಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವೆಂದು ಜನರ ಸಹಕಾರದೊಂದಿಗೆ ಘೋಷಿಸಲಾಗಿದೆ. ಗ್ರಾಮದ ಜನರೇ ಮುಂದೆ ಬಂದು ತಮ್ಮ ಗ್ರಾಮದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಯಾರಾದರೂ ಅಕ್ರಮವಾಗಿ ಮದ್ಯಮಾರಾಟ ಮಾಡಿದರೆ 112 ನಂಬರ್ಗೆ ಕರೆ ಮಾಡಿ ತಿಳಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ಗಂಗಮ್ಮ ಎಂಬ ಗ್ರಾಮದ ಮಹಿಳೆಯೊಬ್ಬರು ಆಗಮಿಸಿ, ಮದ್ಯಪಾನದಿಂದ ನಮ್ಮ ಕುಟುಂಬದ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಮದ್ಯಪಾನ ಮಾಡುತ್ತಿದ್ದ ನನ್ನ ಪತಿಯಿಂದ ನಮಗೆಲ್ಲ ನೆಮ್ಮದಿಯಿಲ್ಲದಂತಾಗಿತ್ತು. ಮದ್ಯಪಾನ ಮುಕ್ತ ಗ್ರಾಮ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಯುವಕರ ಹೋರಾಟಕ್ಕೆ ಸಿಕ್ತು ಪ್ರತಿಫಲ.. ಮದ್ಯಮುಕ್ತ ಗ್ರಾಮವಾಯ್ತು ಅಮ್ಮನಹಟ್ಟಿ..!