ಬೆಳಗಾವಿ: ದೂದ್ಸಾಗರ್ ಜಲಪಾತ ನೋಡಲು ತೆರಳಿದ ಯುವಕರ ತಂಡದ ಸಮಯಪ್ರಜ್ಞೆಯಿಂದ ರೈಲು ಅಪಘಾತ ತಪ್ಪಿದೆ.
ಬೆಂಗಳೂರಿನ ಗೌರವ್ ಟಿ.ಆರ್.ಕೌಶಿಕ್, ಪ್ರಜ್ವಲ್, ಮನಿಷಾ, ವಿನೋದ್ ಸೇರಿದಂತೆ ಆರು ಜನರ ಯುವಕರ ತಂಡ ಮಹಾರಾಷ್ಟ್ರ ಮತ್ತು ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ದೂದ್ಸಾಗರ್ ಜಲಪಾತ ನೋಡಲು ಟ್ರಕ್ಕಿಂಗ್ ಹೊರಟಿದ್ದರು. ಈ ಯುವಕರ ತಂಡ ದೂದ್ಸಾಗರದ ವ್ಯೂ ಪಾಯಿಂಟ್ನಿಂದ ಜಲಪಾತವನ್ನು ನೋಡಿ ಆನಂದಿಸುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ರೈಲ್ವೆ ಹಳಿ ಮೇಲೆ ಬೃಹತ್ ಮರ ಬೀಳುತ್ತಿರುವುದನ್ನು ಗಮನಿಸಿದ್ದಾರೆ.
ಅದೇ ಸಮಯದಲ್ಲಿ ರೈಲು ಬರುತ್ತಿರುವ ಶಬ್ದವೂ ಯುವಕರ ಕಿವಿಗೆ ಬಿದ್ದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಗೌರವ್ ಮತ್ತು ಆತನ ಸಹೋದ್ಯೋಗಿಗಳು ಮೈಮೇಲೆ ಹಾಕಿಕೊಂಡಿರುವ ಕೆಂಪು ಟೀ ಶರ್ಟ್, ಜಾಕೆಟ್ ಮತ್ತು ಟವೆಲ್ಗಳನ್ನು ಬೀಸುತ್ತಾ ರೈಲು ನಿಲ್ಲಿಸುವಂತೆ ಚಾಲಕನಿಗೆ ತಿಳಿಸಿದ್ದಾರೆ.
ಇತ್ತ ಯುವಕರನ್ನು ಗಮನಿಸಿದ ರೈಲು ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಇದರಿಂದ ವೇಗವಾಗಿ ಬರುತ್ತಿದ್ದ ರೈಲು ಮರ ಬಿದ್ದ ಜಾಗದಿಂದ ಕೇವಲ 10 ಮೀಟರ್ ದೂರದ ಅಂತರದಲ್ಲಿ ನಿಂತಿದೆ.
ಯುವಕರ ಕಾರ್ಯಕ್ಕೆ ಮೆಚ್ಚುಗೆ
ಕಳೆದೊಂದು ವಾರದಿಂದ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ನಿರಂತರ ಮಳೆ ಆಗುತ್ತಿದೆ. ಹೀಗಾಗಿ, ದೂದ್ ಸಾಗರ ಸಮೀಪದಲ್ಲಿಯೇ ಬೃಹತ್ ಮರವೊಂದು ರೈಲು ಟ್ರ್ಯಾಕ್ ಮೇಲೆ ಉರುಳಿ ಬಿದ್ದಿದೆ. ರೈಲು ನಿಂತ ತಕ್ಷಣ ಯುವಕರು ರೈಲು ಚಾಲಕ, ಆತನ ಸಹನಿರ್ದೇಶಕರು ಮತ್ತು ಇನ್ನಿಬ್ಬರು ಉದ್ಯೋಗಿಗಳು ಸೇರಿಕೊಂಡು ಬಿದ್ದ ಮರ ತೆರವು ಮಾಡಿದ್ದಾರೆ. ಇತ್ತ ಯುವಕರ ಕಾರ್ಯಕ್ಕೆ ರೈಲ್ವೆ ಚಾಲಕ ಸೇರಿದಂತೆ ಸಿಬ್ಬಂದಿ ಮತ್ತು ಪ್ರಯಾಣಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಗಣೇಶೋತ್ಸವ ಆಚರಣೆಗೆ ವಿನಾಯಿತಿ ಕೋರಿಕೆ: ಸಂಜೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿರುವ ಸಿಎಂ