ಮಂಗಳೂರು (ದಕ್ಷಿಣ ಕನ್ನಡ) : ನ್ಯಾಯಾಲಯದ ಆದೇಶದಂತೆ ಠಾಣೆಯಲ್ಲಿರುವ ವಾಹನವನ್ನು ಬಿಡಿಸಲು ಲಂಚದ ಬೇಡಿಕೆ ಇರಿಸಿ, ಲಂಚ ಪಡೆದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದ ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮೊಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ್ಗೆ ಜಾಮೀನು ಲಭಿಸಿದೆ.
ಜ.27 ರಂದು ವಾಹನವನ್ನು ಬಿಡಿಸಲು ಉತ್ತರ ಪೊಲೀಸ್ ಠಾಣೆಗೆ ಹೋದಾಗ ಇನ್ಸ್ಪೆಕ್ಟರ್ ಮೊಹಮ್ಮದ್ ಶರೀಫ್ ಲಂಚದ ಬೇಡಿಕೆ ಇಟ್ಟಿದ್ದು, ಅದನ್ನು ಪೊಲೀಸ್ ಕಾನ್ಸ್ಟೇಬಲ್ ಪ್ರವೀಣ್ ನಾಯ್ಕ್ ಅವರಿಗೆ ನೀಡುವಂತೆ ತಿಳಿಸಿದ್ದರು. ದೂರುದಾರರು ಲಂಚವನ್ನು ನೀಡದೆ ಇದ್ದಿದ್ದರಿಂದ ವಾಹನ ಬಿಡಿಸಲು ಸತಾಯಿಸಿರುತ್ತಾರೆ ಎಂದು ಲೋಕಾಯುಕ್ತ ಠಾಣೆಗೆ ದೂರನ್ನು ನೀಡಿದ್ದರು.
ಅದರಂತೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇನ್ಸ್ಪೆಕ್ಟರ್ ಮೊಹಮ್ಮದ್ ಶರೀಫ್ ಹಾಗೂ ಕಾನ್ಸ್ಟೇಬಲ್ ಪ್ರವೀಣ್ ನಾಯ್ಕ ಅವರನ್ನು ಜ. 28 ರಂದು ಬಂಧಿಸಿದ್ದರು.
ಆರೋಪಿ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಅರ್ಜಿಯನ್ನು ಪರಿಗಣಿಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ, ಇನ್ಸ್ಪೆಕ್ಟರ್ ಮೊಹಮ್ಮದ್ ಶರೀಫ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಪ್ರವೀಣ್ ನಾಯ್ಕರಿಗೆ ಜಾಮೀನು ಅರ್ಜಿ ಮಂಜೂರು ಮಾಡಿ ಆರೋಪಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಗಳ ಪರವಾಗಿ ವಾದ ಮಂಡಿಸಿದ ಖ್ಯಾತ ವಕೀಲರಾದ ಬಿ. ಅರುಣ್ ಬಂಗೇರ ಮತ್ತು ರಿಹಾನಾ ಪರ್ವಿನ್ ತಿಳಿಸಿದ್ದಾರೆ.
ಇದನ್ನೂ ಓದಿ : ಠಾಣೆಯಿಂದ ಬೈಕ್ ಬಿಡುಗಡೆಗೆ ಲಂಚ ಸ್ವೀಕಾರ: ಪೊಲೀಸ್ ಇನ್ಸ್ಪೆಕ್ಟರ್, ಸಿಬ್ಬಂದಿ ಲೋಕಾಯುಕ್ತ ಬಲೆಗೆ - POLICE INSPECTOR DETAIN