ವಿಜಯಪುರ: ತಹಶೀಲ್ದಾರ್ ಮೋಹನಕುಮಾರಿ ವಾಹನದ ಖಾಸಗಿ ಚಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ನೂತನ ಪ್ರವಾಸಿ ತಾಣದ ಕಟ್ಟಡದಲ್ಲಿ ನಡೆದಿದೆ.
ಆರೀಫ್ ಜುನೇದಿ ( 39 ) ಆತ್ಮಹತ್ಯೆ ಮಾಡಿಕೊಂಡ ಚಾಲಕ. ಈತ ನಗರದ ನೂತನ ಪ್ರವಾಸಿ ತಾಣದ ಕಟ್ಟಡದ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೆಲವು ಬಡ್ಡಿದಾರರಿಂದ ಆರೀಫ್ ಸಾಲ ಮಾಡಿದ್ದನು. ಅವರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತರ ಕುಟುಂಬ ಆರೋಪಿಸಿದೆ. ನಾಲ್ಕು ದಿನಗಳಿಂದ ಈತ ಕಾಣೆಯಾಗಿದ್ದು, ಸೇವೆಗೂ ಹಾಜರಾಗಿರಲಿಲ್ಲ. ಕುಟುಂಬಸ್ಥರು ಕಾಣೆಯಾಗಿರುವ ಕುರಿತು ನಿನ್ನೆ ಮಧ್ಯಾಹ್ನ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಿನ್ನೆ ಸಂಜೆ ಐದು ಗಂಟೆವೇಳೆಗೆ ಆರೀಫ್ ಶವ ಪತ್ತೆಯಾಗಿದೆ. ಸ್ಥಳಕ್ಕೆ ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ ಹಾಗೂ ಡಿವೈಎಸ್ಪಿ ಲಕ್ಷ್ಮೀ ನಾರಾಯಣ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.