ಬೆಳಗಾವಿ: ಕೊರೊನಾ ಭಯದಿಂದ ದೇವರುಗಳೇ ಬಾಗಿಲು ಹಾಕಿಕೊಡು ಕುಳಿತಿರುವಾಗ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಸ್ವಾಮೀಜಿಯೊಬ್ಬರು ಜನರ ಬಳಿಗೆ ಹೋಗಿ, ಸಹಾಯ ಹಸ್ತ ಚಾಚುತ್ತಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಅರಣ್ಯ ಭಾಗವೂ ಸೇರಿದಂತೆ ಅನೇಕ ಪ್ರಮುಖ ಹಳ್ಳಿಗಳಲ್ಲಿಯೂ ಕೂಲಿ ಕಾರ್ಮಿಕರು ಕೆಲಸವೂ ಇಲ್ಲದೇ, ಕೂಲಿಯೂ ಇಲ್ಲದೇ ಪರದಾಡುತ್ತಿದ್ದು, ಅಂತಹ ಕುಟುಂಬಗಳಿಗೆ ಸ್ವಾಮೀಜಿ ಈಗ ಹೊಸ ಆಶಾಕಿರಣವಾಗಿದ್ದಾರೆ.
ಖಾನಾಪುರ ತಾಲೂಕಿನ ಅವರೊಳ್ಳಿಯ ರುದ್ರಸ್ವಾಮಿ ಮಠದ ಶ್ರೀ ಚನ್ನಬಸವ ದೇವರು, ಈ ಕಾರ್ಯ ಮಾಡುತ್ತಿರುವ ಸ್ವಾಮೀಜಿ. ಇವರು ತಮ್ಮ ಕೆಲ ಅನುಯಾಯಿಗಳ ತಂಡ ಕಟ್ಟಿಕೊಂಡು ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ.
ಲೋಂಡಾ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದ ಚಿಕ್ಕ ಮಕ್ಕಳು, ವೃದ್ಧೆ ಸೇರಿ 9 ಜನ ಸಿಲುಕಿಕೊಂಡಿದ್ದು, ಇವರಿಗೆ ಅವರೊಳ್ಳಿ ಚೆನ್ನಬಸವ ದೇವರು, ತಾವು ಸಂಗ್ರಹಿಸಿದ 50 ಕೆಜಿ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ನೀಡಿದರು.
ಅದೇ ರೀತಿ ತಾಲೂಕಿನ ಅಲೆಮಾರಿ ಜನಾಂಗ, ಕೂಲಿಕಾರ್ಮಿಕರು ಸೇರಿ ಒಟ್ಟು 400ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ವಾಮೀಜಿ ನೇತೃತ್ವದ ತಂಡ ದಿನಸಿ ಸಾಮಗ್ರಿಗಳನ್ನು ನೀಡಿದೆ. ಈ ಮೂಲಕ ಅತ್ಯಂತ ಕಿರಿಯ ವಯಸ್ಸಿನ ಈ ಸ್ವಾಮೀಜಿ ಖಾನಾಪುರ ತಾಲೂಕಿನಲ್ಲಿ ಊರೂರು ಅಲೆದಾಡಿ ಅನೇಕ ದಾನಿಗಳ ನೆರವಿಯಿಂದ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ.
ನಿತ್ಯವೂ ಸ್ವಾಮೀಜಿ ಒಂದೊಂದು ಕಡೆ ನೆರವಿಗೆ ತೆರಳುತ್ತಿದ್ದು, ಇದರ ಜೊತೆಗೆ ಗ್ರಾಮೀಣ ಭಾಗದ ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಕಾರ್ಯ ಕೂಡಾ ಮಾಡುತ್ತಿದ್ದಾರೆ.