ಚಿಕ್ಕೋಡಿ: ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ನಲ್ಲಿ ಸುಡುಗಾಡು ಸಿದ್ಧರನ್ನು ಸೇರಿಸಿ ಪರಿಹಾರ ನೀಡಿ ಎಂದು ಕರ್ನಾಟಕ ಸುಡುಗಾಡು ಸಿದ್ಧ ಮಹಾ ಸಂಘದಿಂದ ರಾಯಬಾಗ ತಹಶೀಲ್ದಾರ್ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಎಂ.ಸಿದ್ದಯ್ಯನವರ, ಸರ್ಕಾರ ಸಂಕಷ್ಟದಲ್ಲಿ ಸಿಲುಕಿರುವ ಅನೇಕ ಬಡ ವರ್ಗ ಹಾಗೂ ಬೀದಿ ವ್ಯಾಪಾರಿಗಳು ಸೇರಿದಂತೆ ಅನೇಕರಿಗೆ ಸಹಾಯ ಹಸ್ತ ಚಾಚಿದೆ. ಆದರೆ ಸುಡುಗಾಡು ಸಿದ್ಧ ಜನಾಂಗದವರಿಗೆ ಯಾವುದೇ ಸಹಾಯ ಮಾಡಿಲ್ಲ.
ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು, ರಾಯಬಾಗ ತಾಲೂಕಿನಲ್ಲಿ 98 ಕುಟುಂಬಗಳಿವೆ. 361 ಮಂದಿ ಜನಸಂಖ್ಯೆ ಇದೆ. ಇವರು ಬೇರೆ ಬೇರೆ ಗ್ರಾಮಗಳಿಗೆ ಹೋಗಿ ಜಾದೂ ಕಲೆ ತೋರಿಸಿ ಜನ ಕೊಟ್ಟ ಹಣ ಹಾಗೂ ದವಸ ಧಾನ್ಯದಿಂದ ಜೀವನ ನಡೆಸುತ್ತಾರೆ. ಆದರೆ ಈಗ ಜನಾಂಗ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.