ಬೆಳಗಾವಿ: ಸರ್ಕಾರದ ನಿಯಮ ಉಲ್ಲಂಘಿಸಿ ಸಿಕ್ಕ ಸಿಕ್ಕವರಿಗೆ ವೃದ್ಧಾಪ್ಯ ವೇತನ ನೀಡಲಾಗುತ್ತಿದೆ ಎಂದು ಆರೋಪಿಸಿ ಹಿರಿಯ ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೇಕರ್ ನೇತೃತ್ವದಲ್ಲಿ ಭ್ರಷ್ಟಾಚಾರ ನಿರ್ಮೂಲನ ಮತ್ತು ಸಾಮಾಜಿಕ ಸಂಸ್ಥೆ ಕಾರ್ಯಕರ್ತರು ನಗರದ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಿವಾಜಿ ಕಾಗಣೇಕರ್ ಹಿರಿಯ ಸಾಮಾಜಿಕ ಹೋರಾಟಗಾರರು, ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಅರಸು ಸೇರಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು. ಸದಾ ಜನಪರ ಹೋರಾಟ ಮಾಡುವ ಶಿವಾಜಿ ಕಾಗಣೇಕರ್ ಬೆಳಗಾವಿಯ ನಾಡ ಕಚೇರಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಯಡಿ ಸಂಧ್ಯಾ ಸುರಕ್ಷಾ ಹಾಗೂ ವೃದ್ಧಾಪ್ಯ ಯೋಜನೆಯಡಿ ಸರ್ಕಾರ ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡುತ್ತಿದೆ. ಇಂತಹ ಸಹಾಯಧನ ನೀಡಲು ಸರ್ಕಾರಿ ಕಚೇರಿ ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ವೃದ್ಧಾಪ್ಯ ವೇತನಕ್ಕೆ ಹಿರಿಯ ನಾಗರಿಕರು ಅರ್ಜಿ ಸಲ್ಲಿಸಿದರೆ ನಾಡ ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿ ಲಂಚ ನೀಡಬೇಕು. ಹೀಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿ ಲಂಚ ನೀಡಿದ್ರೆ 25ರಿಂದ 30 ವರ್ಷದ ಯುವಕರಿಗೂ ವೃದ್ಧಾಪ್ಯ ವೇತನ ಸಿಗುತ್ತೆ. ಹೀಗೆ ಕಾನೂನು ಬಾಹಿರವಾಗಿ ಬೆಳಗಾವಿ, ಹಿರೇಬಾಗೇವಾಡಿ, ಉಚಗಾವಿ ಕಂದಾಯ ವಲಯಗಳಲ್ಲಿ ಸುಮಾರು ಒಂದು ಲಕ್ಷ ಜನರು ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆಂದು ಆರೋಪಿಸಿದ್ದಾರೆ.
ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಒಂದೇ ಕುಟುಂಬದ 7 ಜನರು ಅದರಲ್ಲೂ ಯುವಕರು ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆಂದು ಭ್ರಷ್ಟಾಚಾರ ನಿರ್ಮೂಲನಾ ಹಾಗೂ ಸಾಮಾಜಿಕ ಸಂಸ್ಥೆ ಆರೋಪಿಸಿದೆ. ಅಷ್ಟೇ ಅಲ್ಲದೆ ವೃದ್ಧಾಪ್ಯ ವೇತನ ನೀಡುತ್ತಿರುವ ಬಗ್ಗೆ ಆರ್ಟಿಐ ಯೋಜನೆಯಡಿ ಮಾಹಿತಿ ಸಲ್ಲಿಸಿದರೂ ಸಹ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ನಾಡ ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲದೆ ಮೇಲಾಧಿಕಾರಿಗಳು ಸಹ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದರು. ಈ ವೇಳೆ ಖುದ್ದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ಪ್ರಕರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.