ಬೆಳಗಾವಿ : 21ನೇ ಶತಮಾನ ತಂತ್ರಜ್ಞಾನ, ಆವಿಷ್ಕಾರದ, ಜ್ಞಾನದ ಯುಗವಾಗಿದೆ. ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಕೃಷಿ, ಶಿಕ್ಷಣ, ವಾಣಿಜ್ಯ, ಕೈಗಾರಿಕಾ ಕ್ಷೇತ್ರದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದರು.
ತಾಲೂಕಿನ ವಿಟಿಯು ಕ್ಯಾಂಪಸ್ನ ಅಡಿಟೋರಿಯಂ ಹಾಲ್ನಲ್ಲಿ ಲಘು ಉದ್ಯೋಗ ಭಾರತಿ ವತಿಯಿಂದ ಟೆಕ್ ಭಾರತ್-2022ರ 3ನೇ ಎಡಿಸನ್ನ ಅಗ್ರಿಟೆಕ್ ಮತ್ತು ಫೂಡ್ಟೆಕ್ ಪ್ರಿ-ಇವೆಂಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಇಡೀ ಸಮಾಜದಲ್ಲಿ ಸಂಚಲನ ಮೂಡಿಸುತ್ತಿದೆ. ದೊಡ್ಡ ದೊಡ್ಡ ಸಮಸ್ಯೆ, ಸವಾಲುಗಳನ್ನು ಕ್ಷಣಮಾತ್ರದಲ್ಲಿ ಬಗೆಹರಿಸುವ, ಬಯಸಿದ್ದಕ್ಕಿಂತ ಹೆಚ್ಚು ಪರಿಹಾರ ಸಿಗುತ್ತಿದೆ. ಲಘು ಉದ್ಯೋಗ ಭಾರತಿ ಟೆಕ್ಭಾರತ್ ಮೂಲಕ ಸತತವಾಗಿ ಸಮಾಜದ ಸವಾಲು, ಸಮಸ್ಯೆಗಳನ್ನು ಅರಿತುಕೊಂಡು ಕೆಲಸ ಮಾಡುತ್ತಿದೆ ಎಂದರು.
ನಮ್ಮ ದೇಶದ ಆಧಾರಸ್ತಂಭ ಕೃಷಿ ಕ್ಷೇತ್ರ. ಶೇ.60ಕ್ಕಿಂತ ಹೆಚ್ಚು ಜನರು ಕೃಷಿ ಕ್ಷೇತ್ರವನ್ನೇ ಅವಲಂಭಿಸಿದ್ದಾರೆ. ಈ ಜನರ ಭವಿಷ್ಯ ಉತ್ತಮವಾಗಿರಬೇಕು, ಗುಣಮಟ್ಟ ಚೆನ್ನಾಗಿರಬೇಕು, ಅವರಿಗೆ ಗೌರವ, ಸಂತೋಷ ಸಿಗಬೇಕು. ಈ ಮೂಲಕ ಅವರ ಬದುಕು ಹಸನಾಗಬೇಕು, ಅವರ ಬದುಕು ಉತ್ತಮವಾದರೆ ನಮ್ಮೆಲ್ಲರ ಬದುಕು ಚೆನ್ನಾಗಿರಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.
ನಮ್ಮ ಜಿಡಿಪಿಯಲ್ಲಿ 100 ರೂಪಾಯಿ ವಹಿವಾಟಿನಲ್ಲಿ ಕೇವಲ 15 ರೂಪಾಯಿ ಮಾತ್ರ ವ್ಯವಸಾಯ ಕ್ಷೇತ್ರದಲ್ಲಿ ಆಗುತ್ತಿದೆ. ಹೀಗಾಗಿ ಎಲ್ಲೊ ಒಂದು ಕಡೆ ವ್ಯತ್ಯಾಸ ಆಗುತ್ತಿದೆ. ಈ ವ್ಯತ್ಯಾಸವನ್ನು ಸರಿಪಡಿಸುವ ಅವಶ್ಯಕತೆಯಿದೆ. ಹೆಮ್ಮೆ ಪಡುವ ರೀತಿಯಲ್ಲಿ ಕೃಷಿ ಕ್ಷೇತ್ರವನ್ನು ಸುಧಾರಣೆ ಮಾಡಬೇಕಿದೆ ಎಂದರು.
ನಗರ ಪ್ರದೇಶಗಳಿಗೆ ಅತೀ ಹೆಚ್ಚು ಜನರು ವಲಸೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿತ್ತು. ಆದರೆ ಕೊರೊನಾ ಇದಕ್ಕೆಲ್ಲಾ ದೊಡ್ಡ ಪಾಠ ಕಲಿಸಿದೆ. ಎಲ್ಲರೂ ಎಲ್ಲಿ ವಾಸ ಮಾಡುತ್ತಾರೋ ಅಲ್ಲಿಯೇ ಇದ್ದುಕೊಂಡು ಎಲ್ಲ ಕೆಲಸ ಮಾಡುವುದು ವರ್ಚುವಲ್ನಿಂದ ಸಾಧ್ಯವಾಗಿದೆ. ಕೋವಿಡ್ ನಂತರ ಎಲ್ಲರೂ ತಮ್ಮ ಮೂಲ ಗ್ರಾಮಗಳಿಗೆ ಮರಳುವಂತಾಗಿದೆ. ಕಾಡು, ಗುಡ್ಡದ ಮೇಲೆ ಇರಿ. ಯಾರೂ ನಗರಪ್ರದೇಶಕ್ಕೆ ಬರುವ ಅವಶ್ಯಕತೆ ಇಲ್ಲ ಎಂದು ಸಚಿವರು ಸಲಹೆ ನೀಡಿದರು.
ನಿಮ್ಮ ತಂದೆ-ತಾಯಿ ಜೊತೆಗೆ ನಿಮ್ಮ ಊರಿನಲ್ಲಿಯೇ ಇದ್ದುಕೊಂಡು ವರ್ಚುವಲ್, ಡಿಜಿಟಲ್ ಮೂಲಕ ಎಲ್ಲ ರೀತಿಯ ವ್ಯಾಪಾರ, ವಹಿವಾಟು ಮಾಡಬಹುದು. ತಂತ್ರಜ್ಞಾನದ ಬಳಕೆ ಮಾಡಿಕೊಂಡು ಶಿಕ್ಷಣ, ವಾಣಿಜ್ಯ, ಕೈಗಾರಿಕಾ ಕ್ಷೇತ್ರದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಸರಿಯಾಗಿ ನಗರ ಜೀವನಕ್ಕಿಂತಲೂ ಇನ್ನೂ ಗುಣಮಟ್ಟದ ಜೀವನವನ್ನು ನಾವು ವಾಸಿಸುವ ಗ್ರಾಮಗಳಲ್ಲಿಯೇ ಕಂಡುಕೊಳ್ಳಬಹುದು ಎಂದು ಹೇಳಿದರು.