ಬೆಳಗಾವಿ: ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್-ಜೆಡಿಎಸ್ ನಾಯಕರು ಪೈಪೋಟಿಗೆ ಇಳಿದಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿ ಶರಣಾಗಿದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಟ್ವೀಟ್ ಮಾಡಿದ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಬೊಮ್ಮಾಯಿ, ವಿರೋಧ ಪಕ್ಷದವರು ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಡೆದ ಎಲ್ಲ ಘಟನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನಮ್ಮ ಪೊಲೀಸರು ದಕ್ಷತೆಯಿಂದ ಕೆಲಸ ಮಾಡಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಆದರೆ, ವಿಪಕ್ಷಗಳು ಪ್ರಕರಣ ರಾಜಕೀಯಗೊಳಿಸಿ ಅದರ ಲಾಭ ಪಡೆಯಲು ಹೊರಟ್ಟಿದ್ದಾರೆ ಎಂದರು.
ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನವರ ಮಧ್ಯೆ ಅಲ್ಪ ಸಂಖ್ಯಾತರ ಓಲೈಕೆಗೆ ಪೈಪೋಟಿ ನಡೆಯುತ್ತಿದೆ. ಮಾಜಿ ಸಿಎಂ ಎಚ್ಡಿಕೆ ದೇಶದ್ರೋಹ ಕೃತ್ಯ ಮಾಡುವವರಿಗೆ ಪ್ರಚೋದನೆ ಕೊಡಬಾರದು. ಮಂಗಳೂರು ಘಟನೆ ಬಳಿಕ ಮುನ್ನೆಚ್ಚರಿಕೆ ಕ್ರಮಕೈಕೊಂಡಿದ್ದೇವೆ. ಏರ್ಪೋರ್ಟ್ ಹತ್ತಿರ ಅಗತ್ಯ ಭದ್ರತೆ ಮತ್ತು ಅಗತ್ಯ ಬಾಂಬ್ ಸ್ಕ್ವಾಡ್ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.