ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಈಗಾಗಲೇ ಬೆಂಗಳೂರಿನಿಂದ ವಿವಿಧ ಪಕ್ಷಗಳ ರಾಜಕೀಯ ನಾಯಕರು ಕುಂದಾನಗರಿಗೆ ಆಗಮಿಸಿದ್ದಾರೆ. ಗಡಿ ವಿವಾದದ ಕಾವಿನ ನಡುವೆ ಅಧಿವೇಶನ ಆರಂಭವಾಗುತ್ತಿದೆ. ವಿಧಾನಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ಅಧಿವೇಶನ ಇದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಮಹತ್ವದ್ದಾಗಿದೆ.
ಬಿಜೆಪಿ ಸರ್ಕಾರ ಕೊನೆಯ ಅಧಿವೇಶನ ಆಗಿರುವುದರಿಂದ ಕಾಂಗ್ರೆಸ್ ನಾಯಕರು ಸರ್ಕಾರ ಕಟ್ಟಿಹಾಕಲು ಬಾರಿ ರಣತಂತ್ರ ರೂಪಿಸಿದ್ದಾರೆ. ಬೆಳಗಾವಿ ನಗರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷದಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜಿವಾಲಾ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಹಲವು ನಾಯಕರನ್ನು ಒಳಗೊಂಡ ಮಹತ್ವ ಸಭೆ ನಡೆಸಲಾಗಿದೆ. ಅಧಿವೇಶನದ ಸಮಯದಲ್ಲಿ ಸರ್ಕಾರಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ನಾಯಕರು ಪೂರ್ವ ತಯಾರಿ ಸಭೆ ನಡೆಸಿದರು.
ಪೊಲೀಸ್ ಬಂದೋಬಸ್ತ್: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸುಸಜ್ಜಿತವಾಗಿ ನಡೆಯುವ ಉದ್ದೇಶದಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 6 ಜನ ಎಸ್ಪಿ, 11 ಹೆಚ್ಚುವರಿ ಎಸ್ಪಿ, 43 ಡಿವೈಎಸ್ಪಿ, 95 ಸಿಪಿಐ, 241 ಪಿಎಸ್ಐ, 298 ಎಎಸ್ಐ, 2,829 ಹೆಡ್ ಕಾನ್ ಸ್ಟೇಬಲ್, 800 ಕೆಎಸ್ಆರ್ಪಿ ತುಕಡಿ, 170 ಕ್ಯೂಆರ್ಟಿ, 35 ಗರುಡಾ ತಂಡ, 130 ಎಎಸ್ಸಿ ತಂಡ, 100 ವಯರ್ ಲೈಸ್ ಸಿಬ್ಬಂದಿ, 100 ಹೋಮ್ ಗಾಡ್೯ ಸೇರಿದಂತೆ ಸುಮಾರು 4,931 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಪ್ರತಿಭಟನೆ ಬಿಸಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಮತ್ತೊಂದು ಕಡೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್ಡಿಪಿಐಆರ್ ರಾಜ್ಯ ಸಮಿತಿಯಿಂದ ಪ್ರತಿಭಟನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಗೋಕಾಕ್ ಇವರಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನ.. ಜಿದ್ದಾಜಿದ್ದಿನ ಕಲಾಪಕ್ಕೆ ವೇದಿಕೆ ಸಜ್ಜು, ಪ್ರಮುಖ ವಿಧೇಯಕಗಳ ಮಂಡನೆ