ಬೆಂಗಳೂರು: ಯಾವಾಗ ಬೇಕಾದ್ರೂ ಈ ಸರ್ಕಾರ ಬೀಳಬಹುದು. ನಾವಾಗಿ ಅವರ ಶಾಸಕರನ್ನು ಕರೀತಿಲ್ಲ. ಅವರಾಗಿ ಬಂದರೆ ನಾವು ಜವಾಬ್ದಾರರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮತ್ತೆ ತಮ್ಮ ಸರ್ಕಾರ ರಚನೆಯ ಸುಳಿವು ಕೊಟ್ಟಿದ್ದಾರೆ.
ವಿಜಯನಗರದಲ್ಲಿ ನಡೆದ ಲೋಕಸಭಾ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ದೊಡ್ಡ ಅಂತರದಿಂದ ಗೆದ್ದಿದ್ದೇವೆ. ಒಂದೇ ಒಂದು ಕೊರತೆ ಇದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕಿತ್ತು ಅನ್ನೋ ಕೊರಗು ಅದು. ಬಿಜೆಪಿ ಸರ್ಕಾರ ರಚನೆ ಯಾವಾಗ ಅಂತ ಜನ ಹೋದಲ್ಲಿ ಬಂದಲ್ಲಿ ಕೇಳುತ್ತಿದ್ದಾರೆ. ಸರ್ಕಾರ ರಚನೆಗೆ ಕಾಲ ಕೂಡಿ ಬರಬೇಕು ಎಂದು ಸೂಚ್ಯವಾಗಿ ತಿಳಿಸಿದರು.
ರಾಜ್ಯದಲ್ಲಿ ಚುನಾವಣೆ ಯಾವಾಗ ಬೇಕಾದರೂ ಬರಲಿ. ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ . ಚುನಾವಣೆ ಯಾವಾಗಾದರೂ ಬರಲಿ, ನಾವು ಬೆಂಗಳೂರಿನಲ್ಲಿ 22 ಸ್ಥಾನ ಗೆಲ್ಲಬೇಕು. ಸಂಸದರು ಅದಕ್ಕೆ ಪಣ ತೊಡಬೇಕು ಎಂದು ಕರೆ ನೀಡಿದರು.
ಸಿಎಂ ಅಮೆರಿಕ ಪ್ರವಾಸಕ್ಕೆ ಕಿಡಿ:
ಇದೇ ವೇಳೆ, ಮುಖ್ಯಮಂತ್ರಿಗಳ ಅಮೆರಿಕ ಪ್ರವಾಸಕ್ಕೆ ಯಡಿಯೂರಪ್ಪ, ವಿರೋಧ ವ್ಯಕ್ತಪಡಿಸಿದರು. ಇಂಥ ಸಂದರ್ಭದಲ್ಲಿ ವಿದೇಶ ಪ್ರವಾಸ ಬೇಕಿತ್ತಾ? ನಾನು ವಿದೇಶ ಪ್ರವಾಸ ಬೇಡ ಅನ್ನಲ್ಲ. ಬರ ಇರುವಾಗ ವಿದೇಶ ಪ್ರವಾಸ ಬೇಡ. ಗ್ರಾಮೀಣ ಭಾಗದಲ್ಲಿ ಜನ ಬದುಕಿದ್ದಾರಾ ಇಲ್ವಾ ಅಂತ ನೋಡುವುದಕ್ಕೆ ಮುಖ್ಯಮಂತ್ರಿಗೆ, ಸಚಿವರಿಗೆ ಪುರುಸೊತ್ತಿಲ್ಲ ಎಂದು ಕಿಡಿಕಾರಿದರು.
ಕೆಲಸ ನಮ್ಮದು ವೋಟು ಬಿಜೆಪಿಗೆ ಅಂತ ಸಿಎಂ ಹೇಳುತ್ತಾರೆ. ಇದು ಸೊಕ್ಕು, ಧಿಮಾಕಿನ ಮಾತು. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರ ಆದ್ರೆ ಮಾಡಿ ಇಲ್ಲ ಬಿಟ್ಟು ಹೋಗಿ:
ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆಗೂ ಯಡಿಯೂರಪ್ಪ ಕಿಡಿ ಕಾರಿದರು. ಅವರಾಗಿಯೇ ಮಧ್ಯಂತರ ಚುನಾವಣೆ ಬಗ್ಗೆ ಮಾತಾಡುತ್ತಿದ್ದಾರೆ. ಯಾರಿಗೆ ಬೇಕಿದೆ ಈ ಮಧ್ಯಂತರ ಚುನಾವಣೆ? ಅಧಿಕಾರ ಮಾಡುವುದಾದರೆ ಮಾಡಿ, ಇಲ್ಲ ಬಿಟ್ಟು ಹೋಗಿ ಎಂದು ವಾಗ್ದಾಳಿ ನಡೆಸಿದರು.