ಬೆಂಗಳೂರು: ಕಾನೂನು ಸಚಿವ ಮಾಧುಸ್ವಾಮಿ ಅವರು ರೈತ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ನಿಂದಿಸಿದ್ದಕ್ಕೆ ಅವರ ವಿರುದ್ಧ ಡಿಜಿಪಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ದೂರು ಸಲ್ಲಿಸಿದ್ದಾರೆ.
ಸದ್ಯ ಮಾಧುಸ್ವಾಮಿ ವಿರುದ್ಧ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಬೆಂಗಳೂರು ಕಾಂಗ್ರೆಸ್ ವಕ್ತಾರ ಮುರಳಿ ನೇತೃತ್ವದಲ್ಲಿ ಕಾರ್ಯಕರ್ತರು ದೂರು ನೀಡಲು ತೆರಳಿದ್ದರು. ಆದರೆ ಡಿಜಿ ಇಲ್ಲದ ಕಾರಣ ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ಕುಮಾರ್ ಪಾಂಡೆ ಅವರ ಮೂಲಕ ಡಿಜಿಗೆ ದೂರು ಸಲ್ಲಿಸಿದರು. ಸಚಿವ ಮಾಧುಸ್ವಾಮಿ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ದೂರನಲ್ಲಿ ಸಚಿವ ಮಾಧುಸ್ವಾಮಿ ಅವರು ಮಹಿಳೆಯರ ಮೇಲೆ ದರ್ಪ ತೋರಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು ಅಕ್ಷಮ್ಯ ಅಪರಾಧ ಎಂದು ಉಲ್ಲೇಖಿಸಲಾಗಿದೆ.
ಕೋಲಾರಾಕ್ಕೆ ಮಾಧುಸ್ವಾಮಿ ಕೆರೆ ವೀಕ್ಷಣೆಗೆ ಬಂದಾಗ ಸಮಸ್ಯೆ ಕುರಿತು ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿ ಗೌಡ ತಿಳಿಸಿದ್ದರು. ಈ ವೇಳೆ ಸಚಿವರು 'ರಾಸ್ಕಲ್, ನಾನು ಬೇರೆಯವರ ಥರ ಅಲ್ಲ, ಬಾಯಿ ಮುಚ್ಚಿಕೊಂಡು ಸುಮ್ನೆ ಹೋಗು ಎಂದು ನಿಂದಿಸಿದ್ದರು. ಸದ್ಯ ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ. ಪ್ರತಿಪಕ್ಷದ ನಾಯಕರು ಈ ಹೇಳಿಕೆಯನ್ನು ಖಂಡಿಸಿದ್ದಾರೆ.