ಬೆಂಗಳೂರು : ರಾಜ್ಯದ ಹೆದ್ದಾರಿಗಳಲ್ಲಿ ಅವೈಜ್ಞಾನಿಕವಾಗಿ ಟೋಲ್ ಪ್ಲಾಜಾಗಳನ್ನು ಹಾಕಿ ಸಾರ್ವಜನಿಕರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದು, ರಾಜ್ಯ ಸರ್ಕಾರ ಇದನ್ನು ಪುನರ್ ಪರಿಶೀಲಿಸಿ ಪುನಃ ಸಮೀಕ್ಷೆ ನಡೆಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.
ಇಂದು ಪ್ರಶ್ನೋತ್ತರ ವೇಳೆ ಮಾಜಿ ಸಚಿವ, ಕಾಂಗ್ರೆಸ್ ಸದಸ್ಯ ಡಾ.ಜಿ.ಪರಮೇಶ್ವರ್ ಅವರು ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಎಂ. ಕಾರಜೋಳ ಅವರು ಉತ್ತರಿಸುತ್ತಿದ್ದ ವೇಳೆ, ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ನಿಯಮಗಳ ಪ್ರಕಾರ 60 ಕಿ.ಮೀಗೆ ಒಂದು ಟೋಲ್ ಪ್ಲಾಜಾ ಇರಬೇಕು. ಆದರೆ, ಕೆಲವು ಕಡೆ ಬೇಕಾಬಿಟ್ಟಿಯಾಗಿ ಹಾಗೂ ಅವೈಜ್ಞಾನಿವಾಗಿ ಟೋಲ್ ಪ್ಲಾಜಾ ಅಳವಡಿಸಿ ಜನರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಸರ್ಕಾರ ಇದನ್ನು ಮತ್ತೊಮ್ಮೆ ಪರಿಶೀಲಿಸಿ ಸಮೀಕ್ಷೆ ನಡೆಸಬೇಕೆಂದು ಸಲಹೆ ನೀಡಿದರು.
ಹೆದ್ದಾರಿಗಳ ನಿರ್ವಹಣೆಗೆ ಬಳಕೆದಾರರಿಂದ ಶುಲ್ಕವನ್ನು ಪಡೆಯಬೇಕೆಂಬುದರಲ್ಲಿ ಎರಡು ಮಾತಿಲ್ಲ. ಹಾಗಂತ ವಸೂಲಿ ಮಾಡಲು ಸಾಧ್ಯವಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ ಅವರು, ನಿಯಮಗಳ ಪ್ರಕಾರ 60 ಕಿ.ಮೀಗೆ ಒಂದು ಟೋಲ್ ಪ್ಲಾಜಾ ಹಾಕಬೇಕೆಂಬ ನಿಯಮವಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದನ್ನು ನಿರ್ವಹಣೆ ಮಾಡುತ್ತದೆ. ಎಲ್ಲೆಲ್ಲಿ ಈ ರೀತಿ ತೊಂದರೆ ಇದೆಯೋ ಅದರ ಬಗ್ಗೆ ಅಕಾರಿಗಳ ಗಮನಕ್ಕೆ ತರಲಾಗುವುದು. ಖುದ್ದು ನಾನೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ನನಗೂ ಕೂಡ ಈ ಬಗ್ಗೆ ಅನೇಕ ಸದಸ್ಯರಿಂದ ಮಾಹಿತಿ ಬಂದಿದೆ. ನಾವು ರಸ್ತೆಗಳನ್ನು ನಿರ್ಮಾಣ ಮಾಡಬೇಕಾದಾಗ ವಿಶ್ವಬ್ಯಾಂಕ್, ಏಷ್ಯಾ ಅಭಿವೃದ್ದಿ ಬ್ಯಾಂಕ್ ಸೇರಿದಂತೆ ಮತ್ತಿತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುತ್ತೇವೆ. ಸಾಲ ಹಿಂದಿರುಗಿಸಬೇಕು. ಇದಕ್ಕಾಗಿ ಸುಂಕ ವಿಧಿಸುವುದು ಅನಿವಾರ್ಯ ಎಂದು ಸಮರ್ಥಿಸಿಕೊಂಡರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪರಮೇಶ್ವರ್ ಅವರು, ವಾಹನ ತೆಗೆದುಕೊಳ್ಳುವಾಗಲೇ ಜೀವಮಾನ ತೆರಿಗೆ ಹಾಕುತ್ತಾರೆ. ನಂತರ ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಸುಂಕ ವಿಧಿಸಿದರೆ ವಾಹನ ಸವಾರರು ಸುಂಕ ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸಿದರು. ನನ್ನ ಮತ ಕ್ಷೇತ್ರವಾದ ಕೊರಟಗೆರೆ ಮತ್ತು ಮಳವಳ್ಳಿ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 21 ಕಿ.ಮೀಗೆ ಒಂದು ಟೋಲ್ ಪ್ಲಾಜಾ ಹಾಕಲಾಗಿದೆ. ಕಾನೂನಿನ ಪ್ರಕಾರ 60 ಕಿ.ಮೀಗೆ ಹಾಕಬೇಕು. ಬೇಕಾಬಿಟ್ಟಿ ಹಾಕಿದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿತ್ನಾಳ್ ದನಿಗೂಡಿಸಿ, ನಮ್ಮ ಕಡೆ 7 ಕಿ.ಮೀಗೊಂದು ಟೋಲ್ ಪ್ಲಾಜಾ ಹಾಕಲಾಗಿದೆ. ಅವರು ಬೇಕಾಬಿಟ್ಟಿಯಾಗಿ ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಜೆಡಿಎಸ್ ಸದಸ್ಯರಾದ ಡಾ.ಅನ್ನದಾನಿ, ವೆಂಕಟರಾವ್ ನಾಡಗೌಡ, ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಧ್ವನಿಗೂಡಿಸಿ, ಟೋಲ್ ಪ್ಲಾಜಾಗಳಲ್ಲಿ ಹಗಲು ದರೋಡೆಯಾಗುತ್ತಿದ್ದು, ಸರ್ಕಾರ ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.