ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಎಪಿಜೆ ಅಬ್ದುಲ್ ಕಲಾಂ ಕನ್ನಡ ಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಬೊಕ್ಕೆ, ನೆನಪಿನ ಕಾಣಿಕೆಗೆ ನಿರ್ಬಂಧ ವಿಧಿಸಿ ಕನ್ನಡ ಪುಸ್ತಕ ನೀಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಕೇಂದ್ರ ಸಚಿವ ನಾರಾಯಣಸ್ವಾಮಿ ಪಾಲನೆ ಮಾಡಿದ್ದಾರೆ.
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಬಿಜೆಪಿ ಕಚೇರಿಗೆ ಭೇಟಿ ನೀಡಿ ಅಲ್ಲಿಂದ ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದರು.
![Union Minister Narayana swamy presents Kalam book to CM Bommai](https://etvbharatimages.akamaized.net/etvbharat/prod-images/kn-bng-08-central-minister-cm-meet-script-7208080_16082021200854_1608f_1629124734_203.jpg)
ಈ ಸಂದರ್ಭದಲ್ಲಿ ಸಚಿವ ನಾರಾಯಣಸ್ವಾಮಿ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ಇದಕ್ಕೆ ಪ್ರತಿಯಾಗಿ ಎಪಿಜೆ ಅಬ್ದುಲ್ ಕಲಾಂ ಅವರ ಕೃತಿಯನ್ನು ಸಿಎಂ ಬೊಮ್ಮಾಯಿ ಅವರಿಗೆ ನಾರಾಯಣಸ್ವಾಮಿ ನೀಡಿದರು. ಹೂವಿನ ಹಾರ, ಬೊಕ್ಕೆ ಶಾಲು ಇತ್ಯಾದಿ ಯಾವುದನ್ನೂ ತರದೇ ಕೇವಲ ಕನ್ನಡ ಪುಸ್ತಕ ತರುವ ಮೂಲಕ ಸರ್ಕಾರದ ಆದೇಶದ ಪಾಲನೆ ಮಾಡಿದ್ದಾರೆ.